ಅಮ್ಮಿನಬಾವಿ ಶಾಂತಲಿಂಗ ಶ್ರೀಗಳ 90ನೆಯ ವರ್ಧಂತಿ..
ಧಾರವಾಡ: ಇಲ್ಲಿಗೆ ಸಮೀಪದ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರ 90ನೆಯ ವರ್ಧಂತಿ ಸಮಾರಂಭ ಬುಧವಾರ (ಆಗಷ್ಟ-30ರಂದು) ರಾತ್ರಿ 8 ಗಂಟೆಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ. ಬೈಲಹೊಂಗಲ ತಾಲೂಕು ದೊಡವಾಡ ಹಿರೇಮಠದ ಶ್ರೀಜಡೆಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭ ಉದ್ಘಾಟಿಸುವರು.
ಹಿರಿಯ ಶ್ರೀಗಳು ತಮ್ಮ 5ನೆಯ ವರ್ಷದಲ್ಲಿಯೇ(1939) ಸನ್ಯಾಸ ದೀಕ್ಷೆಗೆ ಒಳಗಾಗಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಗುರುತ್ವಾಧಿಕಾರವನ್ನು ಹೊಂದಿದ್ದು, ತಮ್ಮ ಸುದೀರ್ಘ 89 ವರ್ಷಗಳ ಸನ್ಯಾಸದ ಬದುಕಿನಲ್ಲಿ ನಿರಂತರ ಶಿವಪೂಜಾ ತಪೋನುಷ್ಠಾನ ಮಾಡಿ ಧರ್ಮ ಜಾಗೃತಿಗೆ ಶ್ರಮಿಸಿದ್ದಾರೆ. ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತ ಸಂಕುಲದ ಸಹಕಾರದೊಂದಿಗೆ 1965ರಲ್ಲಿ ಶ್ರೀಶಾಂತೇಶ್ವರ ಪೌಢ ಶಾಲೆಯನ್ನು ಹಾಗೂ 1991ರಲ್ಲಿ ಕನ್ನಡ ಪ್ರಾಥಮಿಕ ಶಾಲೆಯನ್ನೂ ಪ್ರಾರಂಭಿಸುವ ಮೂಲಕ ವಿದ್ಯಾವಿಕಾಸಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
*ಉಡಿ ತುಂಬುವ ಕಾರ್ಯಕ್ರಮ* : ಆದರ್ಶ ಶಿಕ್ಷಕ, ಅನುಭಾವಿ ದಿ. ವೀರಯ್ಯ ಯರಗಂಬಳಿಮಠ ಹಾಗೂ ದಿ. ಈರಮ್ಮ ಯರಗಂಬಳಿಮಠ ಅವರ ಸಂಸ್ಮರಣೆಯಲ್ಲಿ ಅಮ್ಮಿನಬಾವಿ ಗ್ರಾಮದ ಶೋಭಾ ಯರಗಂಬಳಿಮಠ ಅವರಿಂದ 108 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವೂ ಜರುಗಲಿದೆ. ‘ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರು ಶತಾಯುಷಿಗಳಾಗಲಿ’ ಎಂಬ ಭಕ್ತಿಯ ಪ್ರಾರ್ಥನೆಯೊಂದಿಗೆ ಶ್ರೀಮಠದ ವಿವಿಧ ಭಕ್ತಗಣವು ಸಕ್ಕರೆ, ಬೆಲ್ಲ, ಅಕ್ಕಿ, ರವೆ, ತೆಂಗಿನಕಾಯಿ ಮುಂತಾದವುಗಳ ಮೂಲಕ ಭಕ್ತಿಯ ತುಲಾಭಾರ ಸೇವೆಗಳನ್ನು ಸಲ್ಲಿಸುವರು. ವರ್ಧಂತಿಯ ದಿನ ಅಮ್ಮಿನಬಾವಿ ಗ್ರಾ.ಪಂ. ಮಾಜಿ ಅಧ್ಯಕ್ಷ ದಿ. ಬಸಯ್ಯ ಗುಡಿ ಅವರ ಸ್ಮರಣಾರ್ಥ ಅಬಕಾರಿ ಇಲಾಖೆ ಸಿಪಿಐ ಅಮೃತ ಗುಡಿ ದಾಸೋಹ ಸೇವೆ ಸಲ್ಲಿಸುವರು. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಗದಗ, ಹಾವೇರಿ, ಶಿರಸಿ ಹಾಗೂ ದೂರದ ಮಹಾರಾಷ್ಟçದ ಗಡಹಿಂಗ್ಲಜದಿಂದಲೂ ಭಕ್ತ ಸಮೂಹ ಪಾಲ್ಗೊಳ್ಳುವರೆಂದು ಹಿರಿಯ ಶ್ರೀಗಳ ವರ್ಧಂತಿ ಮಹೋತ್ಸವ ಸಮಿತಿಯ ಮಾಧ್ಯಮ ಪ್ರಕಟಣೆ ತಿಳಿಸಿದೆ.