ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ; ಪ್ರೊ.ಸಿ.ವಿ. ಕೆರಿಮನಿ ಇನ್ನಿಲ್ಲ
ಲಕ್ಷ್ಮೇಶ್ವರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಪ್ರೊ.ಸಿ.ವಿ.ಕೆರಿಮನಿಯವರು ಆ.೨೮ರಂದು ಸೊಮವಾರ ಸಂಜೆ ತಮ್ಮ ೮೪ನೇ ವಯಸ್ಸಿನಲ್ಲಿ ಇಹಲೋಕ ತ್ಯೇಜಿಸಿದ್ದು ಪುಲಿಗೆರೆಯ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಸಿವಿಕೆ ಅವರು ಪತ್ನಿ, ಮೂವರು ಪುತ್ರಿಯರು, ಪುತ್ರ ಸೇರಿ ಅಪಾರ ಬಂಧುಗಳು, ಸಾಹಿತ್ಯಾಭಿಮಾನಿ ಬಳಗವನ್ನು ಅಗಲಿದ್ದಾನೆ.
ಪುಲಿಗೆರೆ ಸಾಹಿತ್ಯ, ಸಾಂಸ್ಕೃತಿಕ ಲೋಕದ ರಾಯಭಾರಿಯಂತಿದ್ದ ಸಿವಿಕೆ ಅವರು
ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದವರಾದ ಚನ್ನಪ್ಪ ವಿರುಪಾಕ್ಷಪ್ಪ ಕೆರಿಮನಿ ಜನಿಸಿದ್ದು ೧೯೪೧ರಲ್ಲಿ, ಕಲಿತದ್ದು ಧಾರವಾಡದಲ್ಲಿ.
ಲಕ್ಷ್ಮೇಶ್ವರದ ಪುರಸಭಾ ಕಾಲೇಜಿನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕರಾಗಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಪರಿಮಳ ಪಸರಿಸಿ ಭಾಷೆಯ ಜ್ಞಾನ-ಅಭಿಮಾನ ಮೊಳಗಿಸಿದರು.
ಹಂಪಿ ಕನ್ನಡ ವಿ.ವಿ ಆಡಳಿತದ ಸದಸ್ಯರು, ಕರ್ನಾಟಕ ವಿವಿ ಕಾಲೇಜು ಶಿಕ್ಷಕ ಸಂಘದ ಉಪಾಧ್ಯಕ್ಷರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅನನ್ಯ. ನವಲಗುಂದದಲ್ಲಿ ನಡೆದ ತಾಲೂಕು ಕಸಾಪ ಸಮ್ಮೇಳಾನಾಧ್ಯಕ್ಷರಾಗಿದ್ದರು.
ಭಾರತೀಯ ಹಬ್ಬಗಳು, ತಿರುಳ್ಗನ್ನಡನಾಡು ಪುಲಿಗೆರೆ, ಷಡಕ್ಷರದೇವ, ವೀರಶೈವ ಸಾಹಿತ್ಯ ಸಮೀಕ್ಷೆ, ಗೊಮ್ಮಟ ದರ್ಶನ, ಮೈಲಾರ ಮಹಾದೇವ, ಚೆಲುವ ಕನ್ನಡ ,“ಗದಗ ಜಿಲ್ಲೆ ಒಂದು ಅಧ್ಯಯನ” ಗದಗಿನಲ್ಲಿ ನಡೆದ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪಾದಿತ “ಬೆಳ್ವೊಲ ಬೆಳಕು” ಗ್ರಂಥ ಗದಗ ಜಿಲ್ಲೆಯ ಸಾಂಸ್ಕೃತಿ ಕ್ಷೇತ್ರದ ಕಣಜ ಗ್ರಂಥವೆಂದೇ ಹೇಳಬಹುದಾಗಿದೆ.
ಶರೀಫ ಪ್ರಶಸ್ತಿ, ರಾಜ್ಯಮಟ್ಟದ ಮನುಕುಲ ಪ್ರಶಸ್ತಿ, ಅಮೋಘವರ್ಷ ನೃಪತುಂಗ ಪ್ರಶಸ್ತಿ, ಉತ್ತಮ ರೋಟರಿ ಕ್ಲಬ್ ಅಧ್ಯಕ್ಷ ಪ್ರಶಸ್ತಿ ಸೇರಿ ಕಿರೀಟವೆಂಬಂತೆ ೨೦೧೨ನೇ ಸಾಲಿನ ಕರ್ನಾಟಕ ಸರಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಿವಿಕೆ ಅವರ ನಿಧನಕ್ಕೆ ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ರಾಜಕಾರಣಿಗಳು, ಗಣ್ಯರು, ಹಿರಿಯರೂ ಸಂತಾಪ ಸೂಚಿಸಿದ್ದಾರೆ. ಆ.೨೯ ರ ಮಂಗಳವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ಲಕ್ಷ್ಮೇಶ್ವರದಲ್ಲಿ ನೆರವೇರಲಿದೆ.