ನಿರಾಶಾಯದಾಯಕ ಮತ್ತು ನೌಕರ-ವಿರೋಧಿ ಬಜೆಟ್
ರಾಜ್ಯದ ಜನತೆ ಮತ್ತು ಸರ್ಕಾರಿ ನೌಕರರು ಹೊಸ ಸರ್ಕಾರದ ಬಜೆಟ್ ನ್ನು ಬಹು ನಿರೀಕ್ಷೆಯಿಂದ ನೋಡುತ್ತಿದ್ದರು. ಮಾನ್ಯ ಮುಖ್ಯಮಂತ್ರಿಗಳು 2023-24ನೇ ಬಜೆಟ್ ವೆಚ್ಚದ ಗಾತ್ರವನ್ನು ರೂ. 327 ಲಕ್ಷ ಕೋಟಿಗೆ ನಿಗಧಿಪಡಿಸಿ, ಉತ್ತಮ ತೆರಿಗೆ ಸಂಗ್ರಹದ ಜೊತೆಗೆ 5 ಗ್ಯಾರಂಟಿ ಕಾರ್ಡುಗಳನ್ನು ಜಾರಿಗೊಳಿಸಲು ರೂ. 52,000 ಕೋಟಿ ತೆಗೆದಿರಿಸಿರುವುದು ಸ್ವಾಗತಾರ್ಹ ಹೆಜ್ಜೆ, ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಿದ್ದರೂ, ಕೇವಲ ಸಾಂಕೇತಿಕವಾಗಿದೆ.
ಎನ್.ಪಿ.ಎಸ್ . ಪದ್ಧತಿಯನ್ನು ರದ್ದುಗೊಳಿಸಿ, ನಿಶ್ಚಿತ ಪಿಂಚಣಿಯನ್ನು ಮರುಸ್ಥಾಪಿಸುವ ಕುರಿತು ಪರಿಗಣಿಸದೇ ಇರುವುದು ನೌಕರರಲ್ಲಿ ತೀವ್ರ ನಿರಾಶೆ ಮೂಡಿಸಿದೆ.
ಹಾಗೆಯೇ, 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕೂಡಲೇ ಜಾರಿಗೊಳಿಸುವುದರ ಜೊತೆಗೆ ಅದಕ್ಕೆ ತಗಲುವ ಅಂದಾಜು ರೂ. 18,000 ಕೋಟಿ ಅನುದಾನವನ್ನು ಬಜೆಟ್ನಲ್ಲಿ ಮೀಸಲಿರಿಸಿಲ್ಲ.
ಸರ್ಕಾರದ ಖಾಲಿಯಿರುವ ಮತ್ತು ಹೊಸದಾಗಿ ಘೋಷಿಸಿರುವ ಯೋಜನೆಗಳನ್ನು ರಾಜ್ಯದ 7 ಕೋಟಿ ಜನತೆಗೆ ತಲುಪಿಸಲು ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 5.20 ಲಕ್ಷ ಮಾತ್ರ ಮಂಜೂರಾದ 7,73 ಲಕ್ಷ ಹುದ್ದೆಗಳ ಪೈಕಿ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು 2.60 ಲಕ್ಷದಷ್ಟಿದೆ.
ವೇತನ ಸೌಲಭ್ಯಗಳ ನಷ್ಟ ಮತ್ತು ಖಾಲಿ ಹುದ್ದೆಗಳ ಹೊರೆ ಹಾಲಿ ನೌಕರರ ಮೇಲೆ ಬಿದ್ದಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅರ್ಹ ವಿದ್ಯಾವಂತ ಯುವಜನತೆಗೆ ಸೇವಾ ಭದ್ರತೆ ಇಲ್ಲದ ಮತ್ತು ಅತಿ ಕಡಿಮೆ ವೇತನ ನೀಡುವ ಗುತ್ತಿಗೆ/ ಹೊರಗುತ್ತಿಗೆ/ ಅತಿಥಿ ಶಿಕ್ಷಕರು/ ಅತಿಥಿ ಉಪನ್ಯಾಸಕ ಇತ್ಯಾದಿ ಆರೆಕಾಲಿಕ ಹುದ್ದೆಗಳು ಮಾತ್ರ ಲಭ್ಯ. ಈ ಸಮಸ್ಯೆಗಳ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪ ಮಾಡದೇ ಇರುವುದು ದುರದೃಷ್ಟಕರ, ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಇವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಪ್ರಸ್ತಾಪ ಮಾಡಬೇಕಾಗಿತ್ತು.
ಆಡಳಿತ ಸುಧಾರಣೆ ಆಯೋಗ-2ರ ಶಿಫಾರಸ್ಸುಗಳಲ್ಲಿ ಕೆಲವು ಉತ್ತಮ ಅಂಶಗಳಿದ್ದಾಗ್ಯೂ ಸಹ ಆರೋಗ್ಯ, ಶಿಕ್ಷಣ, ಇನ್ನೂ ಹತ್ತಾರು ಇಲಾಖೆಗಳ ಸೇವೆಗಳನ್ನು ಖಾಸಗೀಕರಣ ಮಾಡುವ ಅಂಶಗಳಿವೆ. ಇದನ್ನು ಮರುಪರಿಶೀಲಿಸಲು ಕ್ರಮ ವಹಿಸಬೇಕಿದೆ. ಆಡಳಿತ ಸುಧಾರಣೆಗಳ ನೆಪದಲ್ಲಿ ಇಲಾಖೆ ಮತ್ತು ನಿಗಮ ಮಂಡಳಿಗಳನ್ನು ವಿಲೀನಗೊಳಿಸುವ ಮುಚ್ಚುವ ಕ್ರಮಗಳನ್ನು ಹಿಂಪಡೆಯಲು ಯಾವುದೇ ಪ್ರಸ್ತಾಪವಾಗಿಲ್ಲ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಕ್ರಮಗಳನ್ನು ಸಹ ಹಿಂಪಡೆಯುವ ಬಗ್ಗೆಯೂ ಪ್ರಸ್ತಾಪವಿಲ್ಲ.
ಈ ಹಿನ್ನೆಲೆಯಲ್ಲಿ, ಇದೊಂದು ನಿರಾಶಾಯದಾಯಕ ಮತ್ತು ನೌಕರ-ವಿರೋಧಿ ಬಜೆಟ್ ಆಗಿದೆ.
(ಹೆಚ್.ಎಸ್.ಜೈಕುಮಾರ್)
ಅಧ್ಯಕ್ಷರು
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ