ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸಭೆಯ ನಿರ್ಣಯ..
ಕಾವೇರಿ ನದಿ ನೀರಿನ ಹಂಚಿಕೆಯ ಅನ್ಯಾಯದ ಖಂಡನೆ
ಧಾರವಾಡ : ಕನ್ನಡ ನಾಡಿನಲ್ಲಿಯೇ ಹುಟ್ಟಿ ಹರಿದಿರುವ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯದ ರೈತರ ಹಿತಾಸಕ್ತಿ ಕಾಪಾಡದೇ ಆರಂಭದಿಂದಲೂ ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯವನ್ನು ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಬಲವಾಗಿ ಖಂಡಿಸಿದೆ.
ನಗರದಲ್ಲಿ ಶುಕ್ರವಾರ ಜರುಗಿದ ಸಮಿತಿಯ ಸರ್ವ ಸದಸ್ಯರ ಸಭೆಯು ಈ ಕುರಿತು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಹಿಂದಿನಿಂದಲೂ ಕಾವೇರಿ ನದಿ ಪಾತ್ರದ ರೈತರ ಹಿತಾಸಕ್ತಿ ಕಡೆಗಣಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗಿದೆ. ಪ್ರಸ್ತುತ ಮಳೆಯ ಕೊರತೆಯಿಂದಾಗಿ ಕಾವೇರಿ ಕಣಿವೆಯಲ್ಲಿ ನೀರಿಲ್ಲದಿದ್ದರೂ ಮತ್ತೆ ಮತ್ತೆ ತಮಿಳುನಾಡಿಗೆ ನೀರು ಬಿಡಬೇಕೆಂಬ ನಿರ್ಣಯಗಳು ರಾಜ್ಯದ ಪಾಲಿಗೆ ಮಾರಕವಾಗಿವೆ. ಮೈಸೂರು, ಮಂಡ್ಯ ಸೇರಿದಂತೆ ಕಾವೇರಿ ನದಿ ಪಾತ್ರದ ನಾಡಿನ ರೈತರು ತೀವ್ರ ಕಷ್ಟದ ಸಂದರ್ಭವನ್ನು ಎದುರಿಸುತ್ತಿದ್ದು, ಈಗ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವಿರೋಧಿಸಿದೆ.
ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಕಾವೇರಿ ನದಿ ನೀರು ಮತ್ತು ಕೃಷ್ಣರಾಜ ಸಾಗರ ಜಲಾಶಯಗಳ ವಾಸ್ತವ ಸ್ಥಿತಿಯ ವರದಿಗಳನ್ನು ಅನಾವರಣಗೊಳಿಸಿದ್ದು, ಬರುವ ದಿನಗಳಲ್ಲಿ ಕನ್ನಡಿಗರ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಸಂದರ್ಭ ಎದುರಾಗಿದ್ದು, ಇಂತಹ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಮಧ್ಯಂತರ ಆದೇಶಗಳನ್ನು ಪುನರ್ ಪರಿಶೀಲಿಸಬೇಕೆಂದು ಸಮಿತಿಯು ತನ್ನ ನಿರ್ಣಯದಲ್ಲಿ ಆಗ್ರಹಪಡಿಸಿದೆ.
ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಮಿತಿಯ ಪದಾಧಿಕಾರಿಗಳಾದ ಶಿವಶಂಕರ ಹಿರೇಮಠ, ಎಸ್.ಎಚ್. ಮಿಟ್ಟಲಕೋಡ, ಶಂಕರ ಕುಂಬಿ, ನಿಂಗಣ್ಣ ಕುಂಟಿ, ಹನುಮಾಕ್ಷಿ ಗೋಗಿ, ಶಶಿಧರ ತೋಡಕರ, ಗುರುಮೂರ್ತಿ ಯರಗಂಬಳಿಮಠ, ಕೆ.ಎಚ್. ನಾಯಕ, ಡಾ. ರಾಮು ಮೂಲಗಿ, ನಾಗರತ್ನಾ ಹಡಗಲಿ, ವ್ಹಿ.ಎನ್. ಕೀರ್ತಿವತಿ, ವಿಶೇಷ ಆಮಂತ್ರಿತರಾಗಿದ್ದ ಶಾಸಕ ಅರವಿಂದ ಬೆಲ್ಲದ, ಮಾಜಿ ಮೇಯರ್ ಪೂರ್ಣಾ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರುಗಳಾದ ವಿಜಯಾನಂದ ಶೆಟ್ಟಿ, ಮಂಜುನಾಥ ಬಟ್ಟೆಣ್ಣವರ ಇತರರು ಇದ್ದರು.
1981-82ರಲ್ಲಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕೆ ಪೂರಕವಾದ ಗೋಕಾಕ ಚಳುವಳಿಯ ಸಂದರ್ಭದಲ್ಲಿ ಕನ್ನಡದ ಅಸ್ಮಿತೆಗಾಗಿ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸುದೀರ್ಘ ಹೋರಾಟವನ್ನು ನಡೆಸಿ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.