ಕನ್ನಡ ದೇಗುಲದಲ್ಲಿ ವಿದ್ಯುತ್ ಗ್ರಿಡ್ ಬೇಡ : ಸಾಹಿತಿಗಳ ಆಗ್ರಹ.
ಧಾರವಾಡ: ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಸಮಗ್ರ ವಿಕಾಸಕ್ಕೆ ತನ್ನನ್ನೇ ತಾನು ಸಮರ್ಪಿಸಿಕೊಂಡಿರುವ ಕನ್ನಡದ ಶಕ್ತಿ ಕೇಂದ್ರ ಹಾಗೂ ಕನ್ನಡ ದೇಗುಲವೇ ಆಗಿರುವ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು(ಈಗಿನ ಡಯಟ್) ಆವರಣದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಗ್ರಿಡ್ ನಿರ್ಮಾಣ ಮಾಡಬಾರದು ಎಂದು ನಗರದ ಹಲವಾರು ಸಾಹಿತಿಗಳು ರಾಜ್ಯ ಸರಕಾರ ಮತ್ತು ಜಿಲ್ಲಾ ಆಡಳಿತವನ್ನು ಆಗ್ರಹಿಸಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರ, ಡಾ. ಬಾಳಣ್ಣ ಶೀಗೀಹಳ್ಳಿ, ಶ್ರೀನಿವಾಸ ವಾಡಪ್ಪಿ, ವೆಂಕಟೇಶ ಮಾಚಕನೂರ, ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ, ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ. ಎಂ. ಹಿರೇಮಠ ಅವರು ಈ ಕುರಿತು ಜಂಟಿ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಕನ್ನಡ ಜನಭಾಷೆಯಾಗಿದ್ದ ಪ್ರದೇಶಗಳಲ್ಲಿ ಕನ್ನಡೇತರ ಭಾಷೆಗಳು ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿಯೇ ಕನ್ನಡ ಪ್ರಾಥಮಿಕ ಶಾಲೆಗಳ ಆರಂಭಿಸಿ, ಅಲ್ಲಿ ಬೋಧನೆಗೆ ಕನ್ನಡ ಶಿಕ್ಷಕರನ್ನು ಅಣಿಗೊಳಿಸಿ ಕನ್ನಡವು ಅಳಿಸಿಹೋಗದಂತೆ ಅದನ್ನು ಉಳಿಸಿ ಬೆಳೆಸಿದ ಕೀರ್ತಿಗೆ ಡಯಟ್ ಭಾಜನವಾಗಿದೆ ಎಂದಿದ್ದಾರೆ.
ಡಯಟ್ ಆವರಣವು ಡೆಪ್ಯೂಟಿ ಚೆನ್ನಬಸಪ್ಪ, ರೊದ್ದ ಶ್ರೀನಿವಾಸರಾವ್, ರಾ.ಹ.ದೇಶಪಾಂಡೆ, ಗಂಗಾಧರ ತುರಮರಿ, ಧೋಂಡೋ ನರಸಿಂಹ ಮುಳಬಾಗಿಲ, ಮ.ಪ್ರ. ಪೂಜಾರ ಸೇರಿದಂತೆ ಅನೇಕ ಕನ್ನಡದ ದಿಗ್ಗಜರ ಕಾರ್ಯಕ್ಷೇತ್ರ. ಕನ್ನಡ ನಾಡು-ನುಡಿ ಹೋರಾಟಗಳ ಶಕ್ತಿ ಕೇಂದ್ರವಾಗಿ ಕನ್ನಡ ಚರಿತ್ರೆಯ ಭಾಗವಾಗಿ ಆಡಳಿತದಲ್ಲಿ ಕನ್ನಡ, ಜನಮನದಲ್ಲಿ ಕನ್ನಡ, ಕನ್ನಡ ಅಂಕಿಗಳ ಬಳಕೆ ಮತ್ತಿತರ ನೆಲೆಗಳಲ್ಲಿ ಕನ್ನಡವು ಬೆಳೆದು ಬರಲು ನಿರಂತರ ಶ್ರಮಿಸಿರುವ ಡಯಟ್ ಕೇವಲ ಸರಕಾರಿ ಕಚೇರಿಯಾಗಿರದೇ ಉನ್ನತ ಕನ್ನಡ ಪರಂಪರೆಯ ಮೇರು ಸಂಸ್ಥೆ ಎಂದು ಬಣ್ಣಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ವಸತಿ ಗೃಹದ ಆಸುಪಾಸಿನಲ್ಲಿಯೇ 20 ಗುಂಟೆಗೂ ಅಧಿಕವಾದ ಸರಕಾರಿ ನಿವೇಶನವಿದ್ದು, ಅಲ್ಲಿಯೇ ವಿದ್ಯುತ್ ಗ್ರಿಡ್ ಸ್ಥಾಪಿಸಬೇಕೆಂದು ಎಲ್ಲ ಸಾಹಿತಿಗಳು ಒತ್ತಾಯಿಸಿದ್ದಾರೆ.