ಬೆಳಗಾವಿ ವಿಭಾಗ ಮಟ್ಟದ ಶಿಕ್ಷಕರ ಚಿತ್ರಕಲಾ ಶಿಬಿರದ ಸಮಾರೋಪದಲ್ಲಿ ಹೆಚ್ಚುವರಿ ಆಯುಕ್ತೆ ಜಯಶ್ರೀ ನುಡಿ
‘ ಪರೀಕ್ಷಾ ಅಕ್ರಮಗಳನ್ನು ಇಲಾಖೆ ಸಹಿಸುವುದಿಲ್ಲ’
ಧಾರವಾಡ : ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ನಕಲು ವಿಧಾನವನ್ನು ಅವಲಂಬಿಸದಂತೆ ಅವರಲ್ಲಿ ಅಧ್ಯಯನದ ಆಸಕ್ತಿಯನ್ನು ಹೆಚ್ಚಿಸಿ ಪಾರದರ್ಶಕ ಪರೀಕ್ಷೆಗಳ ಸಂಘಟನೆಗೆ ಶಿಕ್ಷಕ-ಶಿಕ್ಷಕಿಯರು ಶ್ರಮಿಸಬೇಕು. ಯಾವುದೇ ಸಂದರ್ಭದಲ್ಲಿ ಪರೀಕ್ಷಾ ಅಕ್ರಮಗಳನ್ನು ಇಲಾಖೆಯು ಸಹಿಸುವದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆಯ ಮೂಲಕ ‘ನಕಲು ಮುಕ್ತ ಪರೀಕ್ಷೆಗಳ ಸಂಘಟನೆ ಹಾಗೂ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು’ ಎಂಬ ವಿಷಯವಾಗಿ ನಗರದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಪ್ರೌಢ ಶಾಲಾ ಶಿಕ್ಷಕರ ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರ ಚಿತ್ರಕಲಾಕೃತಿಗಳ ರಚನಾ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಬಾಹ್ಯಾಕಾಶ ಸಂಶೋಧನೆಯೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಭಾರತವು ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ಅಪೇಕ್ಷಿಸುತ್ತಿದೆ. ಇದಕ್ಕೆ ಪೂರಕವಾಗಿ ಶಾಲಾ ಶಿಕ್ಷಣದ ಬೋಧನೆ ರೂಪುಗೊಳ್ಳಬೇಕು ಎಂದು ಹೇಳಿದ ಶಿಂತ್ರಿ ಅವರು, ಚಿತ್ರಕಲಾ ಶಿಕ್ಷಕರ ಕುಂಚ ಕಲ್ಪನೆಯಲ್ಲಿ ಮೈದಾಳಿದ 100 ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚಿಗೆ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಂಜೀವ ಬಿಂಗೇರಿ, ಹಿರಿಯ ಚಿತ್ರಕಲಾ ಪರಿವೀಕ್ಷಕ ಪಿ.ಆರ್. ಬಾರಕೇರ, ವೃತ್ತಿ ಶಿಕ್ಷಣದ ಹಿರಿಯ ಸಹಾಯಕ ನಿರ್ದೇಶಕ ಬಿ.ವೈ. ಭಜಂತ್ರಿ, ಸರಕಾರಿ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಕುರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಜಾತಾ ತಿಮ್ಮಾಪೂರ, ಇ-ಆಡಳಿತ ನಿರ್ವಹಣಾಧಿಕಾರಿ ಶಾಂತಾ ಮೀಸಿ ಇದ್ದರು. ಎಸ್.ಎ.ಕೇಸರಿ, ಬಿ.ಎಂ. ಮಾಳಗಿ, ಗೋಪಾಲ ಚಲವಾದಿ ಇತರರು ಕಾರ್ಯಾಗಾರದ ಸಂಘಟನೆಗೆ ನೆರವಾದರು. ಬೆಳಗಾವಿ, ಬಾಗಲಕೋಟ, ವಿಜಯಪೂರ, ಉತ್ತರಕನ್ನಡ, ಧಾರವಾಡ, ಗದಗ, ಹಾವೇರಿ, ಶಿರಸಿ, ಚಿಕ್ಕೋಡಿ ಜಿಲ್ಲೆಗಳ ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ 50 ಚಿತ್ರಕಲಾ ಶಿಕ್ಷಕರು ಪಾಲ್ಗೊಂಡಿದ್ದರು.