ಭಾರತೀಯ ರೈಲ್ವೆ ಇಲಾಖೆ ದೇಶವನ್ನು ಜೋಡಿಸುವ ಕಾರ್ಯ ಮಾಡುತ್ತಿದೆ; ವಿಶ್ವ ದರ್ಜೆಯ ರೈಲ್ವೆ ನೆಟವರ್ಕ್ ಮಾಡಲಾಗುತ್ತಿದೆ : ರಾಜ್ಯಪಾಲ ಥಾವರಚಂದ್ ಗೆಹ್ಲೋಟ್
ಧಾರವಾಡ ಜೂ.27:ಜಗತ್ತಿನಲ್ಲಿ ರೈಲಿನ ಆಧುನಿಕತೆಯಲ್ಲಿ ಭಾರತ ರೈಲ್ವೆ ಇಲಾಖೆಯೂ ಈಗ ಮೊದಲ ಸ್ಥಾನದಲ್ಲಿದೆ. ದೇಶವನ್ನು ಒಂದೇ ಸೂತ್ರದಡಿ ಜೋಡಿಸುವ ಕೆಲಸವನ್ನು ಭಾರತದ ರೈಲ್ವೆ ಇಲಾಖೆ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹೇಳಿದರು.
ಇಂದು ಬೆಳಿಗ್ಗೆ ಅವರು, ಧಾರವಾಡ ನಗರದಲ್ಲಿ ವಂದೇ ಭಾರತ ರೈಲು ಚಾಲನೆ ನೀಡುವ ಕಾಯ9ಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು.
ಭಾರತದ ಐಕ್ಯತೆಗೆ ರೈಲ್ವೆ ಕೊಡುಗೆ ಅಪಾರ ಕರ್ನಾಟಕ ರಾಜ್ಯಕ್ಕೆ ರೈಲ್ವೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ.ಕರ್ನಾಟಕದ ಎರಡನೇ ವಂದೇ ಭಾರತ ಶುಭಾರಂಭ ಆಗುತ್ತಿದೆ.ಉತ್ತರ ಮತ್ತು ದಕ್ಷಿಣ ಕರ್ನಾಟಕ ಜೋಡಿಸುವ ರೈಲು ಇದಾಗಿದೆ. ವಂದೇ ಭಾರತ ರೈಲು ರಾಷ್ಟ್ರೀಯ ಗೌರವದ ಪ್ರತೀಕ ಮೇಕ್ ಇನ್ ಇಂಡಿಯಾದ ವಚನವನ್ನು ಈಡೇರಿಸಿದ್ದಕ್ಕೆ ಇದು ಉದಾಹರಣೆ ಎಂದರು.
ಕರ್ನಾಟಕದಲ್ಲಿಯೂ ರೈಲ್ವೆ ಇಲಾಖೆ ವಿಸ್ತಾರವಾಗಿ ಬೆಳೆಯುತ್ತಿದೆ. ದೇಶದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸುವಲ್ಲಿ ಕೇಂದ್ರ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ. ವಿಶ್ವ ದರ್ಜೆಯ ರೈಲ್ವೆ ನೆಟವರ್ಕ್ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಗಣಿ, ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಅವರು ಮಾತನಾಡಿ, ವಂದೇ ಭಾರತ ರೈಲು ಆತ್ಮ ನಿರ್ಭರದ ಸಂಕೇತ. ರಾಷ್ಟ್ರ ಮಟ್ಟದಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡ ಮಹಾನಗರವನ್ನು ಭಾರತದ ಬಹು ಮುಖ್ಯ ನಗರ ಬೆಂಗಳೂರಿಗೆ ಕಡಿಮೆ ಅವಧಿಯಲ್ಲಿ ಸಂಪರ್ಕಿಸಲು ಸಹಾಯ ಮಾಡಲಿದೆ. ಮುಂದಿನ ದಿನಗಳಲ್ಲಿ ವಂದೇ ಭಾರತ ರೈಲು ಬೆಳಗಾವಿಯಿಂದ ಆರಂಭಿಸಲು ಇರುವ ಸಾಧ್ಯತೆಗಳನ್ನು ಪರಿಶೀಲಿಸಿ, ಆದಷ್ಟು ಬೇಗ ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಉತ್ತರ ಕರ್ನಾಟಕ, ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಕೆ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿ, ಗುರಿ ಸಾಧಿಸಲಾಗಿದೆ. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತದ ಅವಧಿ ಈ ಭಾಗಕ್ಕೆ ಸುವರ್ಣ ಯುಗವಾಗಿದೆ ಎಂದು ಅಭಿಮಾನದಿಂದ ಅವರು ನುಡಿದರು.
ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕಾರ್ಯಕ್ರಮ ವೇದಿಕೆಯಲ್ಲಿ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಮಹಾನಗರಪಾಲಿಕೆ ಸದಸ್ಯರು ಹಾಗೂ ನಗರದ ಇತರ ಗಣ್ಯರು ಉಪಸ್ಥಿತರಿದ್ದರು.
ಧಾರವಾಡದ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದ ನಂತರ ಧಾರವಾಡ ಬೆಂಗಳೂರು ವಂದೇ ಭಾರತ ರೈಲಿಗೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಗಣಿ, ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಚಾಲನೆ ನೀಡಿದರು.
ಉತ್ತರ ಕರ್ನಾಟಕ ಭಾಗದ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಒಟ್ಟು ಐದು ರೈಲುಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅದರಲ್ಲಿ ಧಾರವಾಡ ಬೆಂಗಳೂರು ವಂದೇ ಭಾರತ ಎಕ್ಸ್ಪ್ರೆಸ್ ರೈಲು ಕೂಡ ಒಂದಾಗಿದೆ.
ಧಾರವಾಡದಿಂದ ಹೊರಟ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಸ್ವತಃ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಕೂಡ ವಂದೇ ಭಾರತ ರೈಲಿನಲ್ಲಿ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಿ ಗಮನಸೆಳೆದರು.