ಯುಗ ಯುಗಾದಿ ಕಳೆದ ರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಎಂಬ ಬೇಂದ್ರೆಯವರ ಗೀತೆಯ ಸಾಲುಗಳಲ್ಲಿ ಯುಗಾದಿಯ ಬರುವಿಕೆ , ಅದರಲ್ಲಿನ ಸಡಗರ ವರ್ಣನಾತೀತ . ಕಾರ್ಯಕ್ರಮಗಳ ರಾಜ ವಸಂತನ ಆಗಮನದ ಸೂಚನೆಯ ಜೊತೆಗೆ ಯುಗಾದಿಯು ಎಲ್ಲ ಹಬ್ಬಗಳಿಗೂ ನಾಂದಿಯಾಗಿ ಪ್ರತಿ ಸಂವತ್ಸರದ ಚೈತ್ರ ಮಾಸ ಶುಕ್ಲಪಕ್ಷದ ಪಾಡ್ಯಮಿ ತಿಥಿಯಂದು ಆಚರಿಸಲ್ಪಡುವ ಹಬ್ಬ ಯುಗಾದಿ .
ರಾಮಾಯಣ ಕಾಲಕ್ಕಿಂತ ಮೊದಲು ಉತ್ತರಾಯಣದಿಂದ ಹೊಸ ವರ್ಷದ ಗಣನೆ ಆರಂಭವಾಯಿತು . ಶ್ರೀರಾಮನು ಅವತರಿಸಿದ ಮಾಸ ಹಾಗೂ ಪಟ್ಟಾಭಿಷೇಕ ವಾದ ದಿನವೂ ಕೂಡ ಚೈತ್ರ ಮಾಸ . ವಾರ್ಷಿಕ ರಾಜ ವಸಂತನ ಆಗಮನವೂ ಚೈತ್ರಮಾಸದಿಂದ ಇದು ಚಿತ್ತಾ ನಕ್ಷತ್ರ ಪ್ರಧಾನವಾದ ಮಾಸ . ಈ ದಿನದಂದೇ ಪ್ರಜಾಪತೀ ಬ್ರಹ್ಮನು ಈ ಪ್ರಪಂಚದ ಸೃಷ್ಟಿಯನ್ನು ಪ್ರಾರಂಭಿಸಿದನೆಂದೂ ಪುರಾಣಗಳಿಂದ ತಿಳಿದು ಬರುತ್ತದೆ . ಕ್ರಿ . ಶ . ಆರನೆಯ ಶತಮಾನದಲ್ಲಿ ವರಾಹ ಮಿಹಿರಾಚಾರ್ಯನು ವಸಂತ ವಿಷುವತ್ ಅಶ್ವಿನಿಯಲ್ಲಿ ಸಂಭವಿಸುವುದನ್ನು ಪರಿಗಣಿಸಿ ಚೈತ್ರಮಾಸದಿಂದ ಹೊಸ ವರ್ಷದ ಗಣನೆ ಪ್ರಾರಂಭದನೆಂದು ಹೇಳಿದರು .
ಭಾರತೀಯರಾದ ಹೆಸರು ಚೈತ್ರಶುದ್ದ ಪಾಡ್ಯ , ಮಿ ವರ್ಷದ ಮೊದಲ ದಿನ . ಯುಗಾದಿ ಎಂದರೆ ( ಯುಗಸ್ಯ ಆದಿ ) ಯುಗದ ಆರಂಭ .. ಇದು ಕಾಲ ಸೂಚಕ . ಯುಗಗಳು ನಾಲ್ಕು : ಕೃತಯುಗ , ತ್ರೇತಾಯುಗ , ದ್ವಾಪರ ಯುಗ , ಕಲಿಯುಗ , ಹುಟ್ಟಿದ ಹಗಲು ರಾತ್ರಿ ಎರಡೂ ಸಮವಾಗಿರುವ ಈ ದಿನ ಸೌರಮಾನದ ಲೆಕ್ಕದಂತೆ ಚೈತ್ರಮಾಸದ ವಿಷುವತ್ ಸಂಕ್ರಮಣ ದಿನವು ಆಚರಿಸಲ್ಪಡುವ ದರಿಂದ ಇದನ್ನು ಹೊಸ ವರ್ಷವೆಂದು ಕರೆದರು . ಈ ದಿನ ದ್ವಾಪರ ಯುಗವು ಕಳೆದು ಕಲಿಯುಗವು ಪ್ರಾರಂಭವಾದ ದಿನ ..
ಹಾಗಾದರೆ ಇದನ್ನು ಹೇಗೆ ಆಚರಿಸಬೇಕು .!
1) ಈ ದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚಿತವಾಗಿ ಏಳಬೇಕು . ಏಳುವಾಗ ಬಲ ಮಗ್ಗುಲಾಗಿ ಏಳುತ್ತ ತಮ್ಮ ಇಷ್ಟ ದೇವರನ್ನು ಕುಲದೇವರನ್ನೂ ಮನಸ್ಸಿನಲ್ಲಿ ಸ್ಮರಿಸಿ ವಂದಿಸಬೇಕು . ನಂತರ ಹಿರಿಯರಿಗೆ ತಂದೆ – ತಾಯಿಗಳಿಗೆ ಗುರುಗಳಿಗೆ ನಮಸ್ಕರಿಸ ಬೇಕು .
2) ತೈಲದಿಂದ ಅಭ್ಯಂಜನ ಸ್ನಾನವನ್ನು ಮಾಡಬೇಕು . ನೀರಿನಲ್ಲಿ ಬೇವಿನ ಎಲೆಯ ಎಸಳುಗಳನ್ನು ಹಾಕಿ ಸ್ನಾನ ಮಾಡುವರು .
3 ) ಸ್ನಾನವಾದ ನಂತರ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಪೂಜೆಯನ್ನು ಪೂರೈಸಿ ಪಂಚಾಂಗ ಓದುವವರು ಅದನ್ನು ಪೂಜಿಸಬೇಕು .
4) ಇಂದು ಬೇವಿನ ಚಿಗುರೆಲೆಗಳನ್ನು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು . ಬೇವಿನ ಎಲೆ ಕಹಿ . ಪಿತ್ತಕೋಶದ ಸಂರಕ್ಷಣೆಗೆ ಬೇವಿನ ರಸ ಸಹಾಯಕಾರಿ . ಇದನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಪಿತ್ತ ಶಮನ ಮಾಡಬಹುದು . ಇನ್ನು ಯುಗಾದಿಯ ನಂತರದ ದಿನಗಳಲ್ಲಿ ಸೂರ್ಯನ ಶಾಖದಿಂದ ಭೂಮಿಯ ತಾಪವು ದಿನೇ ಹೆಚ್ಚಾಗುತ್ತಿದೆ . ಇದರಿಂದ ಮನುಷ್ಯನ ಶರೀರಕ್ಕೆ ಉಷ್ಣ ಸಂಬಂಧಿ ಉಪದ್ರವಗಳು ಉಂಟಾಗುತ್ತವೆ . ಬೇವಿನ ಎಲೆ ದಿನವೂ ಬಳಕೆ ಮಾಡುವುದರಿಂದ ಉಷ್ಣ ಸಂಬಂಧಿ ಉಪದ್ರವಗಳನ್ನು ಕಡಿಮೆ ಮಾಡಿಕೊಳ್ಳಬಹುದು .
5 ) ಮಧ್ಯಾಹ್ನ ಹೋಳಿಗೆ , ಪಾಯಸಗಳಂತಹ ಸಿಹಿ ಭಕ್ಷ್ಯಗಳನ್ನು ಮಾಡಿ ಬಂಧುಬಳಗದವರೊಂದಿಗೆ ಸಂತೋಷದಿಂದ ಊಟ ಮಾಡಬೇಕು .
6) ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ . ಪ್ರತಿಯೊಂದು ಮಾಸದ ಫಲ , ರಾಶಿ ಫಲ . ಮಳೆ – ಬೆಳೆ ಮೊದಲಾದ ವಿಚಾರಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳಲು ಸಾಧ್ಯ .
7 ) ಪಾಡ್ಯಮಿಯ ಅನಂತರ ಬಿದಿಗೆಯ ದಿನವೂ ಕೂಡ ಸ್ನಾನ , ಪೂಜೆ , ನೈವೇದ್ಯದಿಗಳನ್ನು ಸಂಜೆಯ ಸಮಯದಲ್ಲಿ ಚಂದ್ರ ದರ್ಶನ ಮಾಡಿ ಹಿರಿಯರಿಗೆ ನಮಸ್ಕರಿಸುವುದು . ಶುಭ ಹಾರೈಸುವುದು ಇಲ್ಲಿದೆ .
8) ಗುಜರಾತ್ , ಮಹಾರಾಷ್ಟ್ರಗಳಲ್ಲಿ ಯುಗಾದಿ ಯಂದು ಮನೆ ಮನೆಯ ಮುಂದೆ ಪಾಡ್ಯದ ಗುಡಿ ( ಧ್ವಜ ) ಕಟ್ಟುವ ಮೂಲಕ ಆಚರಿಸು ತ್ತಾರೆ.ತಮಿಳುನಾಡಿನಲ್ಲಿ ಇದನ್ನು ಚಿತ್ರವಿಷು ಎಂದು ಕರೆಯುತ್ತಾರೆ . ಇರಾನಿಯನ್ನರು ನೌರೋಜ್ ಎಂದೂ ಆಚರಿಸುತ್ತಾರೆ ..
ಮಹಾಭಾರತದಲ್ಲಿಯೂ ಇದರ ಬಗ್ಗೆ ಉಲ್ಲೇಖವಿದೆ . ಭಗವಾನ್ ಶ್ರೀ ಕೃಷ್ಣನು ತನ್ನ ಲೀಲಾ ಮಾನುಷ ದೇಹವನ್ನು ದ್ವಾರಕೆಯ ಸಮೀಪದ ಪುಣ್ಯಕ್ಷೇತ್ರ ವಾದ “ ಪ್ರಭಾಸ “ ದಲ್ಲಿ ತ್ಯಜಿಸಿದ ದಿನ . ಉತ್ತರ ಭಾರತದವರು ವಿಕ್ರಮದ ಶಕದ ಆರಂಭದ ಅಂದರೆ ಕಾರ್ತಿಕ ಶುದ್ದ ಪ್ರಥಮದಂದು ಯುಗಾದಿ ಆಚರಿಸಿದರೆ , ಶಾತವಾಹನ ಅರಸರ ಕಾಲದಲ್ಲಿ ತಮ್ಮ ವಿಜಯದ ಸಂಕೇತವಾಗಿ ಶಾಲಿ ವಾಹನ ಶಕೆ ಆರಂಭಿಸುವ ಮೂಲಕ ಚೈತ್ರ ಶುದ್ದ ಪ್ರಥಮವನ್ನು ಆಚರಿಸಿದ್ದು ಇತಿಹಾಸದಿಂದ ತಿಳಿದು ಬರುತ್ತದೆ . ದಕ್ಷಿಣ ಭಾರತದವರು ಚೈತ್ರ ಶುದ್ದ ಪ್ರಥಮೆಯೆಂದು ಯುಗಾದಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ . ಸಿಂಧಿ ಜನರೂ ಕೂಡ ಚೇತ್ – ಈ – ಚಾಂದ್ ಆಸ್ಸಾಮಿನಲ್ಲಿ “ ಬಿಹು “ ಶಿಖ್ಖರು “ ಬೈಸಾಕಿ “ ಮಣಿಪುರ ದಲ್ಲಿ “ ಚೈರೋಬಾ “ ಬಂಗಾಳಿಗರು “ ಶುಬೋ ನಬೋ ಬರ್ಶೋ “ ಎಂದು ಆಚರಿಸುತ್ತಾರೆ.
ಎರಡು ತಿಥಿಗಳು , ಎರಡು ವಾರಗಳು , ಎರಡು ನಕ್ಷತ್ರಗಳು , ಎರಡು ಪಕ್ಷಗಳು , ಎರಡು ಮಾಸಗಳು , ಎರಡು ಋತುಗಳು , ಎರಡು ಅಯನಗಳು , ಮತ್ತು ಎರಡು ಸಂವತ್ಸರಗಳು ಸೇರುವ ಕಾಲವೇ ಸಂಧಿಕಾಲ ಇರುತ್ತದೆ . ಯುಗಾದಿಯಂದು ಇವೆಲ್ಲವೂ ಸೇರಿ ಎರಡು ಚಂದ್ರಮಾನ ಸಂವತ್ಸರಗಳು ಸಂಧಿಸುವ ಮಹಾಪರ್ವ ಕಾಲದಿಂದ ಯುಗಾದಿ ಅತ್ಯಂತ ಪ್ರಶಸ್ತವಾದ ಪರ್ವಕಾಲ . ವಿಶೇಷವಾಗಿ ಮಾರ್ಚ್ ತಿಂಗಳಿನಲ್ಲಿ ಬರುವ ಯುಗಾದಿಯು ಅಧಿಕ ಮಾಸ ಬಂದಾಗ ಒಂದು ತಿಂಗಳಿನಷ್ಟು ಮುಂದೆ ಹೋಗುತ್ತದೆ .
ಯುಗಾದಿಯಂದು ರತ್ನ ಪಕ್ಷಿಯನ್ನು ನೋಡಿದರೆ ಶುಭವಾಗುತೈತೆ ಎಂಬ ನಂಬಿಕೆಯಿಂದ ಅನೇಕರು ಬೆಳ್ಳಂಬೆಳಿಗ್ಗೆ ಎದ್ದು ಈ ಪಕ್ಷಿ ನೋಡಲು ಹೊರಟವರು . ಅಷ್ಟೇ ಅಲ್ಲ ಈ ದಿನ ಚಂದ್ರನ ನೋಡಿದರೆ ಪವಿತ್ರವೆಂಬ ಭಾವನೆ . ಅಂದು ಕಾಣುವ ಚಂದ್ರನಲ್ಲಿಯ ಬಿಂಬದ ಗೆರೆಗಳ ಮೂಲಕ ವರ್ಷದ ಆಯ – ವ್ಯಯ ಮತ್ತು ಮಳೆ – ಬೆಳೆಗಳನ್ನು ನಿರ್ಧರಿಸುವರು . ಕೆಲವು ಹಳ್ಳಿಗಳಲ್ಲಿ ಹೊನ್ನೆತ್ತು ಹಿಡಿಯುವ ಕಾರ್ಯಕ್ರಮ ನಡೆಯುವರು . ಹೊನ್ನೆತ್ತು “ ಎಂದರೆ ಚೆನ್ನಾಗಿ ಮೆಯಿಸಿದ ಒಂದು ಎತ್ತಿನ ಕೊಂಬಿಗೆ “ ಐದಣ “ ಬಟ್ಟೆಯಿಂದ ಕಟ್ಟಿ , ಆ ಎತ್ತಿನ ಹಗ್ಗ , ಮೂಗುದಾರ ಬಿಚ್ಚಿ ಎಲ್ಲರ ಸಮ್ಮುಖದಲ್ಲಿ ಬೆದರಿಸಿ ಹೋಗುತ್ತಾರೆ . ಯಾರು ಇಂಥ ಸಂದರ್ಭದಲ್ಲಿ ಹಿಡಿದು ನಿಲ್ಲಿಸುವರೋ ಅವರಿಗೆ ಕೊಡಿಗೆ ಕಟ್ಟಿದ್ದ “ ಐದಣ ” ನೀಡುವ ಜೊತೆಗೆ ಬಹುಮಾನ ಕೂಡ ನೀಡುವ ಪದ್ದತಿ ಇದೆ . ರೈತರು ಇಡೀ ವರ್ಷದಲ್ಲಿ ಯಾವ ಬೆಳೆ ಚೆನ್ನಾಗಿ ಬರುತ್ತದೆ ಎಂದು ತಿಳಿದುಕೊಳ್ಳಲು ಹಬ್ಬ ಈ ಒಂದು ವಾರ ಇರುವಾಗಲೇ ಮುಂಚಿತವಾಗಿ ಬೀಜಗಳನ್ನು ಹಾಕಿ ಅವುಗಳಿಗೆ ನೀರುಣಿಸಿ ಗಾಳಿ ಬಿಸಿಲು ಬರುವ ಸ್ಥಳದಲ್ಲಿ ಇಡುತ್ತಾರೆ ಯಾವ ಸಸಿಗಳು ಈ ಕಾಲಕ್ಕೆ ಚೆನ್ನಾಗಿ ಬೆಳೆದಿವೆಯೋ ಅವರು ತಮ್ಮ ಹೊಲ – ಗದ್ದೆಗಳಲ್ಲಿ ಬಿತ್ತನೆ ಮಾಡುವ ಸಂಪ್ರದಾಯವೂ ಕಡೆಗಳಲ್ಲಿದೆ . ಇಷ್ಟೇ ಅಲ್ಲ ಯುಗಾದಿ ದಿನದಂದು ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಿ ಐದು ಸುತ್ತು ಹರಗಿ ಬರುವ ಜೊತೆಗೆ ಆ ದಿನ ಸಂಜೆ ತಮ್ಮ ಗ್ರಾಮ ದೇವತೆಗಳ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವರ್ಷದ ಸುಖ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವರು .
ಬಡವ ಬಲ್ಲಿದರೆಂಬ ಭೇದ – ಭಾವವಿಲ್ಲದೇ ಈ ಹಬ್ಬಕ್ಕೆ ಮನೆಗಳಿಗೆ ಸುಣ್ಣ – ಬಣ್ಣ ಬಳಿಸಿ . ಮನೆಯ ಹಾಸಿಗೆಗಳನ್ನೆಲ್ಲ ಸ್ವಚ್ಛಗೊಳಿಸಿ ಮಡಿ ಮಾಡಿ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣಗಳನ್ನು ಕಟ್ಟಿ ಜಾನುವಾರುಗಳನ್ನು ತೊಳೆದು ಅವುಗಳ ಕೊರಳಿಗೆ ಗೆಜ್ಜೆ ಕಟ್ಟುವ ಮೂಲಕ ಯುಗಾದಿ ಆಚರಿಸಲು ಸಿದ್ದತೆ ಮಾಡಿಕೊಳ್ಳುವ ವರು . ಯುಗಾದಿಯ ಮೂರನೆಯ ದಿನ ವರ್ಷ ತೊಡಕು ಎಂದು ಆಚರಿಸುವ ಸಂಪ್ರದಾಯ ಕೆಲವೆಡೆ ಇದೆ . ಈ ದಿನ ಏನು ಮಾಡುತ್ತಾರೋ ಅದೇ ಇಡೀ ವರ್ಷ ನಡೆದು ಬರುತ್ತದೆ ಎಂಬ ನಂಬಿಕೆಯಿಂದ ಈ ದಿನ ಕಾರ್ಯ ಮಾಡಿದರೆ ವರ್ಷವಿಡೀ ಒಳ್ಳೆಯದಾಗಲಿ ಎಂದು ಒಳ್ಳೆಯ ಕೆಲಸ ಮಾಡುತ್ತಾರೆ .
🔆🔆🔆
✍️ ಶ್ರೀ ವೈ.ಬಿ.ಕಡಕೋಳ. ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿ ತಾ: ಸವದತ್ತಿ ಜಿ: ಬೆಳಗಾವಿ