GOOD NEWS ..
ಅಮಾನತ್ ಗೊಂಡ ಸರ್ಕಾರಿ ಶಾಲೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಆಯುಕ್ತರಿಂದ ಮಹತ್ವದ ಆದೇಶ.
ಆದ್ರೆ ಕೆಲ ಶಿಕ್ಷಕರಿಗೆ ಷರತ್ತುಗಳು ಅನ್ವಯ…
ಕೂಡಲೇ ಈ ಕಾರ್ಯ ಮಾಡಿ!!
ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯಲೋಪದ ಆರೋಪದಡಿಯಲ್ಲಿ ಅಮಾನತ್ತುಗೊಂಡಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಅಮಾನತ್ತನ್ನು ತೆರವುಗೊಳಿಸಿ ಅಗತ್ಯವಿರುವ ಶಾಲೆಗೆ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ, 2023-24 ನೇ ಸಾಲಿನಲ್ಲಿ ಶಿಕ್ಷಕರ ವರ್ಗಾವಣೆ ಕುರಿತಂತೆ ವಿಸ್ತ್ರತವಾದ ಮಾರ್ಗಸೂಚಿ ಸಹಿತ ವೇಳಾಪಟ್ಟಿಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆದರೆ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮ 2021ರ ನಿಯಮ 3 (1) (i) (ii)(iii), ಗಳ ಉಲ್ಲಂಘನೆಯ ಆರೋಪದಡಿಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ ನಿಯಮ-10 (1) (ಡಿ) ರನ್ವಯ ಕೆಲವು ಶಿಕ್ಷಕರುಗಳನ್ನು ಕರ್ತವ್ಯಲೋಪದ ಆರೋಪದಡಿಯಲ್ಲಿ ಆಯಾ ವ್ಯಾಪ್ತಿಯ ಸಕ್ಷಮ ಶಿಸ್ತು ಪ್ರಾಧಿಕಾರಿಗಳು ಅಮಾನತ್ತುಗೊಳಿಸಿರುವ ಪ್ರಕರಣಗಳು ಕಂಡುಬಂದಿರುತ್ತದೆ. ಅಲ್ಲದೇ ಕೆಲವು ಉಪನಿರ್ದೇಶಕರುಗಳು ನಿಯಮಬಾಹಿರವಾಗಿ ವ್ಯತಿರಿಕ್ತ ಬೋಧನಾ ವಿಷಯದ ಹುದ್ದೆಗೆ ಮತ್ತು ವರ್ಗಾವಣಾ ಕಾಯ್ದೆಯ ಸೆಕ್ಷನ್-3ರಡಿಯಲ್ಲಿ ವಿವರಿಸಿರುವಂತೆ ಜಿಲ್ಲೆಯಲ್ಲಿ ಅತೀ ಹೆಚ್ಚು ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ಸ್ಥಳ ನಿಯುಕ್ತಿಗೊಳಿಸದೇ ಆಯಾ ವಲಯದಲ್ಲಿನ ಕಡಿಮೆ ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ಹಾಗೂ ಅಂತಹ ಶಾಲೆಯಲ್ಲಿ ಶಿಕ್ಷಕರ ಅಗತ್ಯತೆ ಇಲ್ಲದಿದ್ದರೂ ವರ್ಗಾವಣಾ ಕಾಯ್ದೆಯನ್ನು ಉಲ್ಲಂಘಿಸಿ ಸ್ಥಳ ನಿಯುಕ್ತಿಗೊಳಿಸಿರುವ ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ.
ಕರ್ತವ್ಯಲೋಪವೆಸಗಿ ಅಮಾನತ್ತುಗೊಂಡ ಶಿಕ್ಷಕರ ಪಟ್ಟಿಯನ್ನು ಸೂಕ್ತ ಕಾರಣಗಳೊಂದಿಗೆ ಮಾನ್ಯ ಆಯುಕ್ತರ ಅನುಮೋದನೆಗೆ ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿತ್ತು. ಆದರೆ ಕೆಲವು ಜಿಲ್ಲೆಗಳ ಉಪನಿರ್ದೇಶಕರು(ಆಡಳಿತ) ಇವರುಗಳು ಮಾತ್ರ ಅಮಾನತ್ತುಗೊಂಡ ಶಿಕ್ಷಕರ ಪಟ್ಟಿಯನ್ನು ಕಳುಹಿಸಿ ಅಮಾನತ್ತು ತೆರವುಗೊಳಿಸಿ ಸ್ಥಳ ನಿಯುಕ್ತಿಗೊಳಿಸುವ ಸಂಬಂಧ ಮಾರ್ಗದರ್ಶನ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿದೆ.
ಅದರಂತೆ ಅಂತಹಾ ಜಿಲ್ಲೆಗಳ ಉಪನಿರ್ದೇಶಕರುಗಳ ಕಛೇರಿಗೆ ಪ್ರತ್ಯೇಕವಾಗಿ ಅಮಾನತ್ತು ತೆರವುಗೊಳಿಸಿ ಸ್ಥಳ ನಿಯುಕ್ತಿಗೊಳಿಸಲು ಅನುಮತಿಯನ್ನು ನೀಡಲಾಗಿತ್ತು. ಉಳಿದಂತೆ ಇನ್ನುಳಿದ ಜಿಲ್ಲೆಗಳಲ್ಲಿಯೂ ಸಹಾ ಅಮಾನತ್ತುಗೊಂಡ ಶಿಕ್ಷಕರು ಅಮಾನತ್ತಿನ್ನಲ್ಲೇ ಮುಂದುವರೆದಿರಬಹುದಾದ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಅಂತಹಾ ಶಿಕ್ಷಕರ ಅಮಾನತ್ತನ್ನು ತೆರವುಗೊಳಿಸಿ ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಸಂಬಂಧ ಈ ಕೆಳಕಂಡಂತೆ ಮಾರ್ಗದರ್ಶನವನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ ಅಮಾನತ್ತುಗೊಂಡಿರುವ ಶಿಕ್ಷಕರನ್ನು ಕಡ್ಡಾಯವಾಗಿ ಶೇ 25% ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳು ಇರುವ ತಾಲ್ಲೂಕಿಗೆ ಅಥವಾ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಖಾಲಿ ಹುದ್ದೆಗಳಿರುವ ತಾಲ್ಲೂಕಿನಲ್ಲಿನ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ‘ಸಿ’ ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಖಾಲಿ ಹುದ್ದೆಗೆ ಮಾತ್ರ ಕಡ್ಡಾಯವಾಗಿ ಸ್ಥಳ ನಿಯುಕ್ತಿಗೊಳಿಸತಕ್ಕದ್ದು. ಪೋಕ್ಕೋ ಕಾಯ್ದೆಯಡಿಯಲ್ಲಿ ಬಂಧನವಾಗಿದ್ದು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ಅಮಾನತ್ತನ್ನು ತೆರವುಗೊಳಿಸಲು ಅವಕಾಶವಿರುವುದಿಲ್ಲ.
ಕೆಲವು ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರನ್ನು ನಕಲಿ ನೇಮಕಾತಿ ಕುರಿತಂತೆ ಅಮಾನತ್ತುಗೊಳಿಸಲಾಗಿದ್ದು ಪ್ರಸ್ತುತ ವಿಚಾರಣೆ ಹಂತದಲ್ಲಿರುವ ಪ್ರೌಢಶಾಲಾ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಸ್ಥಳನಿಯುಕ್ತಿಗೊಳಿಸುವಂತಿಲ್ಲ. ನ್ಯಾಯಾಂಗ ಬಂಧನದಲ್ಲಿರುವ ಶಿಕ್ಷಕರನ್ನು ಅಮಾನತ್ತು ತೆರವುಗೊಳಿಸಿ ಸ್ಥಳ ನಿಯುಕ್ತಿಗೊಳಿಸುವಂತಿಲ್ಲ, ಚುನಾವಣೆ ಸಮಯದಲ್ಲಿ ಜನಪ್ರತಿನಿಧಿ ಕಾಯ್ದೆಯಡಿಯಲ್ಲಿ ಅಮಾನತ್ತುಗೊಂಡ ಶಿಕ್ಷಕರ ಮರು ಸ್ಥಳನಿಯುಕ್ತಿಯು ಸಂಬಂಧಿಸಿದ ಚುನಾವಣಾಧಿಕಾರಿ/ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಅಮಾನತ್ತು ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿರುವ ಶಿಕ್ಷಕರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಕಂಡಿಕೆವಾರು ಉತ್ತರ ಮತ್ತು ಆಕ್ಷೇಪಣಾ ಹೇಳಿಕೆಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ತಡೆಯಾಜ್ಞೆ ತೆರವುಗೊಳಿಸುವ ಕುರಿತಂತೆ ತುರ್ತು ಕ್ರಮಗಳನ್ನು ಕೈಗೊಳ್ಳತಕ್ಕದ್ದು.
ಅನಧಿಕೃತ ಗೈರುಹಾಜರಾಗಿರುವ ಶಿಕ್ಷಕರುಗಳನ್ನು ಯಾವುದೇ ಕಾರಣಕ್ಕೂ ಅಮಾನತ್ತುಗೊಳಿಸಿ ಸ್ಥಳ ನಿಯುಕ್ತಿಗೊಳಿಸತಕ್ಕದ್ದಲ್ಲ. ಈ ಕುರಿತಂತೆ ದಿನಾಂಕ: 26/02/2024 ರಲ್ಲಿ ವಿಸ್ತ್ರತವಾದ ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಒಂದು ವೇಳೆ ಅನಧಿಕೃತ ಗೈರು ಹಾಜರಾಗಿರುವವರನ್ನು ಅಮಾನತ್ತುಗೊಳಿಸಿದಲ್ಲಿ ಜೀವನಾಧಾರ ಭತ್ಯೆ ಪಾವತಿಯಿಂದ ಸರ್ಕಾರಕ್ಕೆ ಆಗುವ ನಷ್ಟವನ್ನು ಸಂಬಂಧಪಟ್ಟವರಿಂದ ವಸೂಲಾತಿ ಮಾಡುವುದರ ಜೊತೆಯಲ್ಲಿ ಅಂತಹ ಪ್ರಾಧಿಕಾರದ ವಿರುದ್ಧ ನಿರ್ಧಾಕ್ಷಿಣ್ಯ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
ಸಕ್ಷಮ ಶಿಸ್ತು ಪ್ರಾಧಿಕಾರಿಗಳು ವ್ಯಾಪ್ತಿಯ ಉಪನಿರ್ದೇಶಕರು(ಆಡಳಿತ) ಇವರೇ ಆಗಿರುವುದರಿಂದ ಕರ್ನಾಟಕ ನಾಗರೀಕ ಸೇವಾ (ಸಿ.ಸಿ.ಎ) ನಿಯಮಗಳು-1957ರ ನಿಯಮ-10(5)(ಸಿ)ರಲ್ಲಿ ಶಿಸ್ತು ಕ್ರಮ ಬಾಕಿ ಇರಿಸಿ ಸೇವೆಗೆ ಪುನರ್ ಸ್ಥಾಪಿಸಲು ತಮ್ಮ ಹಂತದಲ್ಲೇ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ. ಅಮಾನತ್ತು ತೆರವುಗೊಳಿಸುವ ಪ್ರಕರಣದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸುವುದು ಹಾಗೂ ತಕ್ಷಣ ಶಿಕ್ಷಕರ ಸೇವಾ ಮಾಹಿತಿಯನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಅಳವಡಿಸಲು ಕ್ರಮಕೈಗೊಳ್ಳತಕ್ಕದ್ದು ಎಂದು ಸೂಚಿಸಿದೆ.
ಅಮಾನತ್ತುಗೊಂಡಿರುವ ಶಿಕ್ಷಕರ ವಿರುದ್ಧ ಇರುವ ಆರೋಪಗಳಿಗೆ ತುರ್ತಾಗಿ ಆರೋಪಪಟ್ಟಿ ಜಾರಿಗೊಳಿಸಿ ಆರೋಪ ಬೆಳಕಿಗೆ ಬಂದ ದಿನಾಂಕದಿಂದ ಗರಿಷ್ಮ 9 ತಿಂಗಳ ಒಳಗಾಗಿ ವಿಚಾರಣೆಯನ್ನು ಪೂರ್ಣಗೊಳಿಸಿ ಸೂಕ್ತ ದಂಡನೆಯನ್ನು ವಿಧಿಸಲು ತಿಳಿಸಿದೆ. ಈ ಕುರಿತಂತೆ ಮುಂದಿನ ಪ್ರಗತಿ ಪರಿಶೀಲನೆಯಲ್ಲಿ ವಿವರಣೆ ಸಲ್ಲಿಸಲು ತಿಳಿಸಿದೆ.
ಸಿಬ್ಬಂಧಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸುತ್ತೋಲೆಯಲ್ಲಿ ಸೂಚಿಸಿರುವಂತೆ ಆರೋಪ ಬೆಳಕಿಗೆ ಬಂದ ನಂತರ ಗರಿಷ್ಠ 9 ತಿಂಗಳ ಒಳಗಾಗಿ ವಿಚಾರಣೆಯನ್ನು ಪೂರ್ಣಗೊಳಿಸಬೇಕೆಂಬ ಸರ್ಕಾರದ ಸೂಚನೆ ಇದ್ದಾಗ್ಯೂ ಸಹ ನಿಗಧಿತ ಕಾಲಮಿತಿಯೊಳಗೆ ವಿಚಾರಣೆ ನಡೆಸದೇ ಉದ್ದೇಶಪೂರ್ವಕವಾಗಿ ಅನಗತ್ಯ ವಿಳಂಬಧೋರಣೆ ಅನುಸರಿಸುವ ಶಿಸ್ತು ಪ್ರಾಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಮೇಲೆ ವಿವರಿಸಲಾಗಿರುವಂತೆ ಜಿಲ್ಲೆಯಲ್ಲಿ ಉಪನಿರ್ದೇಶಕರು(ಆಡಳಿತ)/ ಕ್ಷೇತ್ರಶಿಕ್ಷಣಾಧಿಕಾರಿಗಳು ಶಿಕ್ಷಕರುಗಳನ್ನು ಅಮಾನತ್ತುಗೊಳಿಸಲಾಗಿದ್ದರೂ ಸಹ ಅಮಾನತ್ತುಗೊಂಡ ಶಿಕ್ಷಕರ ಸ್ಥಳ ನಿಯುಕ್ತಿ ಕುರಿತಂತೆ ಸಕ್ಷಮ ಪ್ರಾಧಿಕಾರಿಗಳು ಉಪನಿರ್ದೇಶಕರು(ಆಡಳಿತ) ಇವರೇ ಆಗಿರುವುದರಿಂದ ಅಮಾನತ್ತು ತೆರವುಗೊಳಿಸುವ ಸಂಬಂಧ ಮೇಲೆ ತಿಳಿಸಿರುವಂತೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳತಕ್ಕದು ಹಾಗೂ ಕೈಗೊಂಡ ಕ್ರಮದ ಕುರಿತ ವರದಿಯನ್ನು ಈ ಪತ್ರದೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಮಾಹಿತಿಯನ್ನು ಉಪನಿರ್ದೇಶಕರು(ಆಡಳಿತ) ಇವರು ಭರ್ತಿ ಮಾಡಿ ಆಯಾ ವಿಭಾಗದ ವಿಭಾಗೀಯ ಸಹನಿರ್ದೇಶಕರು, ಬೆಂಗಳೂರು, ಮೈಸೂರು, ಕಲಬುರ್ಗಿ ಮತ್ತು ಬೆಳಗಾವಿ ವಿಭಾಗ ಇವರಿಗೆ ದಿನಾಂಕ: 25/06/2024 ರ ಒಳಗಾಗಿ ಸಲ್ಲಿಸಲು ತಿಳಿಸಿದೆ.
ವಿಭಾಗೀಯ ಸಹನಿರ್ದೇಶಕರುಗಳು ತಮ್ಮ ವ್ಯಾಪ್ತಿಯ ಉಪನಿರ್ದೇಶಕರು(ಆಡಳಿತ) ಇವರು ಸಲ್ಲಿಸುವ ಮಾಹಿತಿ ನಮೂನೆಯನ್ನು ಕ್ರೋಢೀಕರಿಸಿ ದಿನಾಂಕ: 27/06/2024 ರಂದು ಖುದ್ದಾಗಿ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ. ವರ್ಗಾವಣಾ ಪ್ರಕ್ರಿಯ ಚಾಲ್ತಿಯಲ್ಲಿರುವುದರಿಂದ ಯಾವುದೇ ಲೋಪಗಳಿಗೆ ಆಸ್ಪದ ನೀಡದೇ ಕಡ್ಡಾಯವಾಗಿ ಸೂಚನೆಗಳನ್ನು ಪಾಲಿಸಲು ಸೂಚಿಸಿದೆ.