ಸವದತ್ತಿಯಲ್ಲಿ 16 ರಂದು ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ
ಸವದತ್ತಿ: ಬೆಳಗಾವಿ ಜಿಲ್ಲೆಯ ಸಹೃದಯ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಜೂನ್ 16 ರಂದು ಬೆಳಿಗ್ಗೆ 10. ಕ್ಕೆ ಪಟ್ಟಣದ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಸಂಚಾಲಕ ಎಸ್. ಬಿ. ಗರಗದ ತಿಳಿಸಿದ್ದಾರೆ.
ಸವದತ್ತಿ ಘಟಕದ ಕಸಾಪ ಅಧ್ಯಕ್ಷ, ಹಿರಿಯ ಸಾಹಿತಿಗಳಾದ ಡಾ. ವಾಯ್. ಎಮ್. ಯಾಕೊಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಖ್ಯಾತ ವಿಮರ್ಶಕರಾದ ಡಾ. ಎಚ್. ಎಸ್. ಸತ್ಯನಾರಾಯಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತೀರ್ಪುಗಾರ ಕಥೆಗಾರ ಚನ್ನಪ್ಪ ಅಂಗಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಕು. ಶಿವಪ್ರಿಯಾ ಕಡೇಚೂರ, ನಿಲಯ ಪಾಲಕರಾದ ಹಾಶೀಮ್ ತಹಶಿಲ್ದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶೈಕ್ಷಣಿಕ ಸೇವೆ ಸಲ್ಲಿಸಿದ ಗಣಾಚಾರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸಿ. ಬಿ. ಗಣಾಚಾರಿ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಉಪಸ್ಥಿತರಿರುತ್ತಾರೆ.
ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಕ್ಷತ್ರ ನಕ್ಕ ರಾತ್ರಿ’, ವಿಜಯಪುರದ ಸುಮಿತ್ ಮೇತ್ರಿ ಅವರ ‘ಈ ಕಣ್ಣುಗಳಿಗೆ ಸದಾ ನೀರಡಿಕೆ’, ತುಮಕೂರಿನ ಎಸ್. ಕೆ. ಮಂಜುನಾಥ್ ಅವರ ‘ಗಾಳಿಯ ಎದೆಸೀಳಿ ಹೊರಟ ಹಕ್ಕಿ’, ಬೆಂಗಳೂರಿನ ಡಾ. ಲಕ್ಷ್ಮಣ ವಿ. ಎ. ಅವರ ‘ಕಾಯಿನ್ ಬೂತ್’ ಕವನ ಸಂಕಲನಗಳಿಗೆ ಪ್ರಶಸ್ತಿ ಲಭಿಸಿದ್ದು ಅವರಿಗೆ ರೂ. 2500 ನಗದು ಪುರಸ್ಕಾರ, ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಗುವುದು. ಇದೇ ಸಂದರ್ಭದಲ್ಲಿ ಕವಿಗೋಷ್ಠಿ ನಡೆಯಲಿದ್ದು ರಮೇಶ್ ಮಡಿವಾಳರ, ಹೊನ್ನಪ್ಪ ಕರೆನ್ನಮ್ಮನವರ ಸುಪ್ರಿಯಾ ಮಾಡಮಗೇರಿ, ಎಮ್. ಡಿ. ಬಾವಾಖಾನ್, ಆನಂದ ಹಕ್ಕೆನ್ನವರ, ಆನಂದ ಭೋವಿ, ವಿದ್ಯಾ ರೆಡ್ಡಿ, ವಿಷ್ಣುಪ್ರಿಯ, ಮಂಜುನಾಥ ಸಿಂಗನ್ನವರ, ಮೀನಾಕ್ಷಿ ಸೂಡಿ ಕವನ ವಾಚಿಸಲಿದ್ದಾರೆ.