ಬಣ್ಣಗಳ ರಂಗಿನ ಹಬ್ಬ ಎಲ್ಲರ ಬದುಕನ್ನ ರಂಗಾಗಿಸಲಿ
ಭಾರತೀಯ ಸಮಾಜವು ಸಾಂಪ್ರದಾಯಿಕವಾದದ್ದು, ಕಲೆ, ಆಚರಣೆ, ಹಬ್ಬ-ಹರಿದಿನಗಳನ್ನು ಚಾಚು ತಪ್ಪದೆ ಆಚರಿಸುವ ಭಾರತೀಯರಿಗೆ ಪ್ರತಿ ಹಬ್ಬಗಳ ಹಿನ್ನೆಲೆ ತಿಳಿದಿದೆ. ಹಬ್ಬಗಳು ಎಂದೊಡನೆ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಸದಾ ಜೀವಂತ. ಪ್ರತಿ ಆಚರಣೆಗಳು ಗ್ರಾಮೀಣ ಜನರ ಜೀವನದಲ್ಲಿ ಹಾಸುಹೊಕ್ಕಾಗಿ ಜನಜೀವನದ ಹೃದಯ ಭಾಗವಾಗಿವೆ. ವಾರ್ಷಿಕಾವರ್ತನ ಆಚರಣೆಗಳಲ್ಲಿ ಮರಳಿ ಬರುವ ಹಬ್ಬಗಳೆಲ್ಲವೂ ಸಂಬಂಧ ಬೆಸೆಯುವ ಬೆಸುಗೆಗಳಾಗಿವೆ. ಹಬ್ಬಗಳು ಸಂಬಂಧಗಳನ್ನು ಬೆಸೆಯುವ, ಸಿಹಿಯನ್ನು ಸವಿಯುವ, ಎಲ್ಲರನ್ನು ಒಗ್ಗೂಡಿಸುವ ಸಂಕೇತಗಳು. ಅಂತಹ ಹಬ್ಬಗಳಲ್ಲಿ ಹೋಳಿ ಹಬ್ಬವು ಒಂದು. ಈ ಹಬ್ಬವನ್ನು ಏಕತೆಯನ್ನು ಸಾರುವ ಹಬ್ಬವೆಂದೇ ಹೇಳಬಹುದು.
ಹೋಳಿ ಹಬ್ಬದ ಹಿನ್ನೆಲೆಯನ್ನು ನೋಡಿದಾಗ ಪುರಾಣ, ಪುಣ್ಯಕಥೆಗಳು ಒಂದು ರೀತಿಯ story ಹೇಳಿದರೆ ಪೂರ್ವಜರು ಒಂದೊಂದು ಕಥೆಯನ್ನು ಹೇಳುತ್ತಾರೆ. ಅದೇನೇ ಇದ್ದರೂ ಆ ಪುಣ್ಯ ಪುರಾಣ ಕಥೆಗಳೆಲ್ಲವೂ ಬದುಕಿಗೊಪ್ಪುವ ಮತ್ತು ಬದುಕನ್ನಪ್ಪುವ ಕಥೆ ಸಾರುತ್ತವೆ. ಅಂದುಕೊಂಡಂತೆ ಬದುಕಲು ಹೊಂದಿಕೊಂಡು ಹೋಗಬೇಕು, ಇಲ್ಲದ ಹೊರತು ಬದುಕೇ ಪಾಠ ಕಲಿಸುತ್ತದೆ ಎಂಬುದಕ್ಕೆ ಅನೇಕ ಪುರಾಣ, ಕಥೆಗಳು ನಿದರ್ಶನಗಳಾಗಿವೆ. ಅಂತಹ ಕಥೆಗಳು ಸಾಕಷ್ಟಿವೆ. ಪುರಾಣದಲ್ಲಿ ಉಲ್ಲೇಖಸಿರುವಂತೆ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸನು ತಪಸ್ಸು ಗೈದು ಬ್ರಹ್ಮನ ವರ ಪಡೆದು, ಆ ವರ ಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಹಿಂಸೆ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಪಾಯ (ಉಪಾಯ) ಹೂಡುತ್ತಾರೆ. ನನಗೆ ಸಾವು ಬರುವುದಾದರೆ ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರ ಬಲವೇ ಆತನ ಮದಕ್ಕೆ ಕಾರಣವಾಗಿತ್ತು. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಯೋಗ ಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವಯು ಶಿವನು ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ(ಮನ್ಮಥ)ನ ಮೊರೆ ಹೋದರು. ಅದರ ಫಲವಾಗಿ ತನ್ನ ನಿರ್ನಾಮದ ಅರಿವಿದ್ದರೂ ಸಹ ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ,ಶಿವನ ತಪೋಭಂಗ ಮಾಡುತ್ತಾನೆ. ಇದರಿಂದ ಕೆರಳಿ ತನ್ನ ಮೂರನೇ (ಕಣ್ಣು)ಚಕ್ಷುವನ್ನು ತೆರೆದ ಶಿವನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನ ಪಟ್ಟದರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು,ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದ ಹಿನ್ನೆಲೆಯಲ್ಲಿ ಕಾಮನನ್ನು ಕೋಪದಲ್ಲೇ ಸುಟ್ಟನೆಂಬ ಪ್ರತೀತಿ ಇದೆ.
ಕೃಷ್ಣನಿಗೂ ಪ್ರಿಯವಾದ ಬಣ್ಣದ ಹಬ್ಬ
ಶ್ರೀಕೃಷ್ಣ ಪರಮಾತ್ಮನು ಮಗುವಾಗಿದ್ದ ಸಂಧರ್ಭದಲ್ಲಿ ಕಂಸ ರಾಜನು ಪೂತನಿಯನ್ನು ಸಾಯಿಸಲು ಕಳುಹಿಸಿದ್ದನು. ಆಗ ಬಾಲ ಕೃಷ್ಣನು ರಾಕ್ಷಸಿಯ ಎದೆ ಹಾಲಿನೊಂದಿಗೆ ರಕ್ತವನ್ನು ಬಸಿದು ಹೀರಿದ್ದನು ಆದ್ದರಿಂದಲೇ ಕೃಷ್ಣನ ಮೈಬಣ್ಣವು ನೀಲಿ ಬಣ್ಣಕ್ಕೆ ತಿರುಗಿತು ಎಂದು ಹೇಳಲಾಗುತ್ತದೆ. ನಂತರ ಪೂತನಿ ಎಂಬ ರಾಕ್ಷಸಿಯನ್ನು ಸಂಹಾರವನ್ನು ಮಾಡುತ್ತಾನೆ. ರಾಧೆಯು ಕೃಷ್ಣನ ಮೈಬಣ್ಣ ಬದಲಾಗಿರುವುದಕ್ಕೆ ಚಿಂತಿಸದೆ ಅವನ ಪ್ರೀತಿಯನ್ನು ಗೌರವಿಸಿದಳು. ಅವರಿಬ್ಬರ ಪ್ರೇಮದ ದ್ಯೋತಕವಾಗಿ ಹೋಳಿ ಹಬ್ಬದ ಆಚರಣೆ ಮಾಡಲಾಯಿತು ಎಂದು ಸಹ ಹೇಳಲಾಗುವುದು.
ಇಂತಹ ಅನೇಕ ಕಥೆಗಳನ್ನು ನೋಡಬಹುದು. ಇಲ್ಲಿ ಮೇಲೆ ಹೇಳಿದ ಕಥೆಗಳು ಕೇವಲ ಹಬ್ಬದ ದ್ಯೋತಕ ಇಂತಹ ಅನೇಕ ಕಥೆಗಳು ಇವೆ. ಆ ಕಥೆಗಳೆಲ್ಲವೂ ಕಾಲ್ಪನಿಕವೋ, ಸತ್ಯವೋ, ಮಿಥ್ಯವೋ ತಿಳಿಯದು ಆದರೆ ಮಾನವ ಸಮಾಜಕ್ಕೆ ಒಳಿತನ್ನು ಬಯಸುವ ಮತ್ತು ಒಳಿತಿನ ಕಡೆಗೆ ಸಾಗುವ ಮಾರ್ಗವನ್ನು ತೋರುತ್ತವೆ.
ಇಂದಿಗೂ ಹಳ್ಳಿಗಳಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೋಳಿ ಹಬ್ಬದ ಐದು ದಿನದ ಹಿಂದೆ ಊರ ಯುವಕರೆಲ್ಲ ಚಂದಾ(ಕರ)ಎತ್ತುತ್ತಾರೆ. ಕಾಮನನ್ನು ಗೊಂಬೆ ಮಾಡಿ ಹಳೆಯ ಬಟ್ಟೆಗಳನ್ನು ಹಾಕಿ ಕಾಮನ ಕಟ್ಟೆ ಕಟ್ಟಿ ಗೊಂಬೆ ಕುಡಿಸುತ್ತಾರೆ, ಅದರ ಪಕ್ಕದಲ್ಲೇ ರತಿದೇವಿಯನ್ನು ಕುರಿಸುತ್ತಾರೆ. ಆದರೆ ರತಿದೇವಿಯನ್ನು ದಹನ ಮಾಡುವುದಿಲ್ಲ, ಕಾಮನನ್ನು ಮಾತ್ರವೇ ದಹನ ಮಾಡಲಾಗುವುದು. ಮತ್ತೊಂದು ದಿನ ಊರ ಮನೆಗಳಿಗೆ ತೆರಳಿ ಹಳೆಯ ವಸ್ತುಗಳನ್ನು ಸಂಗ್ರಹಿಸಿ ತಂದು ಹಾಕುತ್ತಾರೆ. ಮೂರನೇ ದಿನ ಮಕ್ಕಳನ್ನು, ದೊಡ್ಡವರನ್ನು ಸೇರಿಸಿ ಪುರಾಣ, ದಂತ ಕಥೆಗಳೆಲ್ಲವನ್ನು ಹಾಡುವ, ಕೇಳುವ ಮೂಲಕ ಜೊತೆಗೆ ಮಕ್ಕಳಿಗೆ ಹಾಡು ಹಾಡಿಸುವ, ಕಥೆ ಹೇಳಿಸುವ ಮೂಲಕ ಗೆದ್ದವರಿಗೆ ಉಡುಗೊರೆ ಕೊಡುತ್ತಾರೆ. ನಂತರ ನಾಲ್ಕನೇ ದಿನದ ಸಾಯಂಕಾಲ ಸಗಣಿಯಿಂದ ಬೆರಣಿ ತಯಾರಿಸಿದ ಮನೆಗಳಿಗೆ ತೆರಳಿ ಬೆರಣಿ ಸಂಗ್ರಹಿಸಿ ಕಾಮನ ಚಿತೆಯೊಳಗೆ ಹಾಕುತ್ತಾರೆ. ಆ ದಿನ ಬೆಳಗಾಗುವ ಮುನ್ನವೇ ಕಾಮನ ದಹನ ಮಾಡುತ್ತಾರೆ. ಜನರು ತಮಗೆ ಬೇಡದ ವಸ್ತುಗಳನ್ನು ತಂದು ಕಾಮನೊಂದಿಗೆ ಸುಡುತ್ತಾರೆ, ತಮಗಿದ್ದ ಚಿಂತೆಗಳನ್ನು ಆ ಚಿತೆಯ ಮುಂದೆ ಕರಗಲೆಂದು ಕಾಮನನ್ನು ದಹಿಸುತ್ತಾರೆ. ಇನ್ನು ಐದನೇ ದಿನವಾದ ಹೋಲಿಯ ದಿನದಂದು ಬಣ್ಣ ತುಂಬಿದ ಮಡಿಕೆಯನ್ನು ಹೊಡೆಯುತ್ತಾರೆ. ಬಿಳಿ ಶುಭ್ರ ವಸ್ತ್ರಗಳನ್ನು ಧರಿಸಿ ವಯಸ್ಸಿನ, ಜಾತಿಯ ಬೇಧ-ಭಾವವಿಲ್ಲದೆ ಎಲ್ಲರೂ ಒಟ್ಟುಗೂಡಿ ಆಚರಿಸುವ ಸಾರ್ವಜನಿಕ ಹಬ್ಬವಾಗಿದೆ ಎಂದು ಹೇಳಬಹುದು. ಹೀಗೆ ಬಣ್ಣದ ಹಬ್ಬದ ಸಂಭ್ರಮವನ್ನು ಪ್ರಪಂಚದಾದ್ಯಂತ ಆಚರಿಯತ್ತಾರೆ.
ಬಣ್ಣಗಳ ಹಬ್ಬವು ಮನಸ್ಸಿಗೆ ಮುದ ನೀಡುವುದಲ್ಲದೆ, ಕಷ್ಟಕಾರ್ಪಣ್ಯಗಳೆಲ್ಲವೂ ಬಣ್ಣಗಳೊಳಗೆ ಕರಗುವಂತೆ ಮಾಡುವ ಶಕ್ತಿ ಇದೆ ಎಂಬುದಾಗಿ ಜನರು ಬಣ್ಣಗಳ ಹಬ್ಬದಲ್ಲಿ ಮಿಂದೇಳುತ್ತಾರೆ. ಕಾಮನ ದಹನವಾದ ನಂತರ ಆಚರಿಸುವ ಬಣ್ಣದ ಹಬ್ಬ ಒಂದುಕಡೆಯಾದರೆ, ಕೃಷ್ಣನಿಗೂ ಸಹ ಬಣ್ಣಗಳೆಂದರೆ ಬಲು ಪ್ರೀತಿ. ಕೃಷ್ಣನು ನೀಲಿ ಬಣ್ಣವನ್ನು ಪ್ರೀತಿಸುತ್ತಾನೆ. ಏಕೆಂದರೆ ನೀಲಿ ಬಣ್ಣವು ಎಲ್ಲ ಬಣ್ಣಗಳ ಸಮ್ಮಿಶ್ರಣದಿಂದ ನಿಲಿಯಾಗಿ ಕಾಣುತ್ತದೆ ಮಾತ್ರವಲ್ಲದೆ ಕೃಷ್ಣನೂ ನೀಲಿಯಾಗೆ ಇರುವುದರಿಂದ ರಾಧೇಯು ಕೃಷ್ಣನನ್ನು ಎಲ್ಲ ಬಣ್ಣಗಳ ಸಂಕೇತಗಳನ್ನು ಕೃಷ್ಣನಲ್ಲಿ ಕಾಣುತ್ತಾಳೆ. ಹೀಗೆ ಬಣ್ಣದ ಹಬ್ಬವನ್ನು ಕುಣಿದು ಕುಪ್ಪಳಿಸಿ ಆಚರಿಸುತ್ತಾರೆ.
ಒಟ್ಟಿನಲ್ಲಿ ಈ ಬಣ್ಣದ ಹಬ್ಬವು ಕಾಮ, ಕ್ರೋಧ, ಮದ, ಮತ್ಸರಗಳನ್ನು, ಅರಿಷಡ್ವರ್ಗಗಳನ್ನು ಅಗ್ನಿಯಲ್ಲಿ ದಹನ ಮಾಡಿ, ಅಸುರ ಗುಣಗಳನ್ನು ನಿರ್ನಾಮಮಾಡಿ ಪ್ರೀತಿ, ವಾತ್ಸಲ್ಯ, ಕರುಣೆಗಳನ್ನು ಬಣ್ಣಗಳ ಸಂಕೇತದಲ್ಲಿ ಬಳಸಿ, ಪ್ರೀತಿ ಪಾತ್ರರಿಗೆ ಬಣ್ಣ ಎರಚಿ ನಾವು ನಮ್ಮವರೆಂದು ಹಬ್ಬದೂರಣ ಸವಿದು ಆಚರಿಸುವ ಹಬ್ಬವೇ ಬಣ್ಣಗಳ ಹಬ್ಬವಾಗಿದೆ. Eny way ಬಣ್ಣ ಬದಲಾಯಿಸುವ ಜನರ ನಡುವೆ ಬದಲಾಗದೇ ಇರುವ ಈ ಬಣ್ಣ ಬಣ್ಣಗಳು ಎಲ್ಲರ ಬದುಕಲ್ಲೂ ಬಣ್ಣದ ರಂಗನ್ನು ತರಲಿ. ಕೆಟ್ಟದ್ದೆಲ್ಲವೂ ನಾಶವಾಗಿ, ಒಳ್ಳೆಯದು ಎಲ್ಲರ ಹೆಗಲೇರಲಿ. ಒಳ್ಳೆಯದು ಒಳ್ಳೆಯದನ್ನೇ ತಂದುಕೊಡುತ್ತದೆ, ಕೆಟ್ಟದ್ದು ಕೆಟ್ಟದ್ದನ್ನೇ ಕರುಣಿಸುತ್ತದೆ ಹಾಗಾಗಿ ಒಳಿತು ಕೆಡುಕುಗಳು ಬದುಕನ್ನು ನಿರ್ಧರಿಸುತ್ತವೆ. ಒಳಿತನ್ನೇ ಮಾಡಿ ಒಳಿತೆ ಆಗಲಿ, ಸತ್ಯ, ಪ್ರೇಮ ಕರುಣೆ, ವಾತ್ಸಲ್ಯ ಇರುವ ಕಡೆ ಆ ಭಗವಂತ ಸದಾ ನೆಲೆಸಿರುತ್ತಾನೆ ಎಂಬ ಸಂಗತಿಯನ್ನು ಎಲ್ಲರು ಅರಿಯಬೇಕಿದೆ. ಜಾತಿ,ಮತಗಳ ಬೇಧಭಾವವಿಲ್ಲದೆ ಎಲ್ಲರು ಸಂಭ್ರಮಿಸುವ ಬಣ್ಣಗಳ ಹಬ್ಬ ಎಲ್ಲರ ಬದುಕನ್ನು ಬಂಗಾರವಾಗಿಸಲಿ…..ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು.
✍?ಡಾ ಮೇಘನ ಜಿ
ಉಪನ್ಯಾಸಕರು
ಸಮಾಜಶಾಸ್ತ್ರ ಅಧ್ಯಯನ ವಿಭಾಗ
ರಾಯಚೂರು ವಿಶ್ವವಿದ್ಯಾಲಯ, ರಾಯಚೂರು.