ನವಿಲುತೀರ್ಥದ ವೈಶಿಷ್ಟ್ಯಪೂರ್ಣ ಹನುಮಾನ ಮಂದಿರ..
ಇಂದು ನವಿಲುತೀರ್ಥ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ.ಪ್ರಸಾದ ವಿನಿಮಯ ಜರುಗಿತ್ತು ಆಫೀಸಿಗೆ ಬರುವಾಗ ಪ್ರಸಾದ ಸ್ವೀಕರಿಸಿ ಬರುವಾಗ ಅರ್ಚಕರು ಸರ್ ಇವತ್ತು ಅಂತರ್ಜಾಲ ತಾಣದಲ್ಲಿ ದೇವಾಲಯದ ಕುರಿತು ಬರಹ ಹಾಕಿರಿ ಅಂತ ಹೇಳಿದರು. ನವಿಲುತೀರ್ಥ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ನದಿಯ ಜಲಾಶಯದಿಂದ ಪ್ರಸಿದ್ದಿ ಪಡೆದ ಪ್ರವಾಸೀ ತಾಣ. ಇದು ಸವದತ್ತಿಯಿಂದ ೧೧ ಕಿ.ಮೀ ಮುನವಳ್ಳಿಯಿಂದ ೫ ಕಿ.ಮೀ ಅಂತರದಲ್ಲಿ ಸವದತ್ತಿ ಮುನವಳ್ಳಿ ಮಾರ್ಗದಲ್ಲಿ ಬರುವುದು. ನವಿಲುತೀರ್ಥದ ಬಸ್ ನಿಲುಗಡೆಯಿಂದ ಮುಂದೆ ಮುನವಳ್ಳಿಯತ್ತ ಬರತೊಡಗಿದರೆ ಬೃಹತ್ ಮರದ ಪಕ್ಕಕ್ಕೆ ಹನುಮಾನ ಮಂದಿರವಿದೆ.ಇದು ೧೨-೧೨-೧೯೬೭ ರಲ್ಲಿ ನಿರ್ಮಿಸಿದ್ದು.ಶನಿವಾರ ಬಂದರೆ ಸಾಕು ಇಲ್ಲಿ ಪೂಜೆಯ ಮೂಲಕ ಆಂಜನೇಯ ತನ್ನ ಭಕ್ತರಿಗೆ ದರ್ಶನವನ್ನೀಯುವನು.ಯಾರೇ ಈ ಮಾರ್ಗದಲ್ಲಿ ಪ್ರತಿನಿತ್ಯ ಚಲಿಸುವಾಗ ತಮ್ಮ ವಾಹನ ನಿಲ್ಲಿಸಿ ಹೋಗಿ ನಮಸ್ಕರಿಸಿ ಮುಂದೆ ಹೊರಡುವುದು ಸಾಮಾನ್ಯ.
. ಕಿಷ್ಕಿಂದಾ ಕಾಂಡದಿಂದ ಹಿಡಿದು ಬಹುಕಾಲ ದೂರವಿದ್ದ ಸೀತಾರಾಮರನ್ನು ಒಂದು ಮಾಡಿ ಶ್ರೀರಾಮ ಪಟ್ಟಾಭಿಷೇಕವನ್ನು ಕಣ್ತುಂಬ ನೋಡಿ ಆನಂದಿಸಿದವನು ಹನುಮಂತ.ಆಗ ಸೀತಾಮಾತೆಯು ಇವನನ್ನು ಕರೆದು “ನೀನು ನನ್ನನ್ನು ನನ್ನ ಪತಿಯ ಹತ್ತಿರ ಸೇರಿಸಿದೆ.ಇದರ ಫಲವಾಗಿ ಶ್ರೀರಾಮನ ಕೀರ್ತಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ನೀನು ಚಿರಂಜೀವಿ”ಎಂದು ಆಶೀರ್ವಾದವನ್ನು ಮಾಡಿರುವಳು.ರಾಮಕಥೆಯೂ ರಾಮಾಯಣದ ಕೀರ್ತಿಯೂ ಉಳಿಯುವವರೆಗೂಈ ಭೂಮಿಯ ಮೇಲೆ ಇರತಕ್ಕದ್ದೆಂದು ಹನುಮಂತನಿಗೆ ದೊರಕಿದ ವರದಿಂದ ಅವರನು ಚಿರಂಜೀವಿಗಳಲ್ಲಿ ಒಬ್ಬನು.ಶ್ರೀ ಹನುಮಂತನನ್ನು ಭಕ್ತಿ ಶೃದ್ದೆಯಿಂದ ಆರಾಧಿಸಿ ಅಧ್ಯಾತ್ಮಿಕ ಶಕ್ತಿ ಸಾಮರ್ಥ್ಯಗಳನ್ನು ಉದಾತ್ತ ಗುಣಗಳನ್ನು ಪಡೆಯಬಹುದು.
ನವಿಲುತೀರ್ಥದ ಹನುಮಂತನ ವಿಶೇಷತೆ
ಈ ವಿಗ್ರಹ ಬಹಳ ವೈಶಿಷ್ಟ್ಯಪೂರ್ಣವಾಗಿದೆ.ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಹತ್ವದ ಸಂಗತಿಗಳು ಗೊತ್ತಾಗುತ್ತವೆ.ವೃಶ ಕಪಿ ಅವತಾರದಿಂದ ಶಿವ ನಾರಾಯಣದ ಪ್ರತೀಕವಾಗಿ ಹನುಮಂತ ಪಂಚಮುಖಿಯಾಗಿಯೂ ಕೂಡ ಪ್ರಸಿದ್ದಿ.ಇಂಥ ಹನುಮಂತನ ಆರಾಧಕರಿಲ್ಲದ ನೆಲವೇ ಇಲ್ಲವೆನ್ನಬಹುದು.ಇತಿಹಾಸವನ್ನು ಅವಲೋಕಿಸಿದಾಗ ೧೬ನೆಯ ಶತಮಾನದಲ್ಲಿ ವಿಜಯನಗರ ಅರಸರ ರಾಜಗುರುಗಳಾದ ಶ್ರೀ ವ್ಯಾಸಸಾರ್ವಭೌಮರು ನಾಡಿನೆಲ್ಲೆಡೆ ೭೩೨ ಹನುಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಅವನ ಆರಾಧನೆಯನ್ನು ಜನಪ್ರೀಯಗೊಳಿಸಿದರು ಎಂಬುದನ್ನು ಓದುತ್ತೇವೆ. ನಾನು ಹೇಳ ಹೊರಟಿರುವುದು ನವಿಲುತೀರ್ಥದ ಹನುಮನು ವ್ಯಾಸರಾಯರ ಪ್ರತಿಷ್ಠಾಪಿತ ೭೩೨ ರಲ್ಲಿ ಒಬ್ಬನು ಎಂಬುದು ಹಾಗಾದರೆ ಈ ವಿಗ್ರಹ ಇಲ್ಲಿ ಹೇಗೆ ಬಂದಿತು ಎಂಬುದೂ ಕೂಡ ಕುತೂಹಲದ ಪ್ರಶ್ನೆ.ಅಣೆಕಟ್ಟು ಕಟ್ಟುವ ಮೊದಲು ನದಿ ಇರುವ ಈ ಬೆಟ್ಟದ ಹಿನ್ನೀರಿನಲ್ಲಿ ಅನೇಕ ಗ್ರಾಮಗಳು ಮುಳುಗಡೆ ಹೊಂದಿವೆ.ಅದರಲ್ಲಿ ಯಜ್ಞಕುಂಡ ಎಂದು ಕರೆಸಿಕೊಂಡ ಯಕ್ಕುಂಡಿ.ಮತ್ತು ಗುರುಗಳ ಊರು ಗುರ್ಲಹೊಸೂರು.ಮಹತ್ವದವು.ಈ ಸಂದರ್ಭ ವ್ಯಾಸರು ಈ ಪಾವನ ನೆಲದ ಸ್ಪರ್ಶ ಮಾಡಿರಬಹುದು.ಚಾಳುಕ್ಯರ ನಂತರದ ದಿನಗಳಲ್ಲಿ ವಿಜಯನಗರ ಅರಸರ ಪ್ರಭಾವ ಬೆಳಗಾವಿ ನಾಡಿನ ಮೇಲೆ ಆಗಿರುವುದನ್ನು ಇತಿಹಾಸದಿಂದ ತಿಳಿಯಬಹುದು.ವ್ಯಾಸರಾಯರು ವಿಜಯನಗರ ಆಳರಸರ ರಾಜಗುರುಗಳಾಗಿದ್ದವರು..
ಅಣೆಕಟ್ಟು ಕಟ್ಟುವಾಗ ನೆಲವನ್ನು ಅಗೆಯುವ ಸಂದರ್ಭ ಈ ವಿಗ್ರಹ ಇಲ್ಲಿ ದೊರಕಿರುವುದನ್ನು ಅರ್ಚಕ ಬಸವರಾಜ ನಿಡಸೋಸಿ ತಿಳಿಸುವರು.ಹಾಗಾದರೆ ಇಲ್ಲಿಯೇ ಏಕೆ ಗುಡಿ ಕಟ್ಟಿದರು ಎಂದು ಪ್ರಶ್ನಿಸಿದಾಗ ಈ ಸ್ಥಳದಲ್ಲಿ ಮೊದಲು ಬಂಡಾರಹಳ್ಳಿಯ ಒಬ್ಬ ವ್ಯಕ್ತಿ ಸಣ್ಣ ಅಂಜನೇಯನ ವಿಗ್ರಹ ಪ್ರತಿಷ್ಠಾಪಿಸಿ ಇದೇ ಸ್ಥಳದಲ್ಲಿ ಆರಾಧಿಸುತ್ತಿದ್ದನಂತೆ. ಅದೇ ಸ್ಥಳ ಈ ಆಂಜನೇಯನನ್ನು ಪ್ರತಿಷ್ಠಾಪಿಸುವುದು ಸೂಕ್ತ ಎಂದು ಅಂದು ಕಾರ್ಯನಿರ್ವಹಿಸುತ್ತಿದ್ದ ನೀರಾವರಿ ಇಲಾಖೆಯ ಅಧಿಕಾರಿಗಳ ತೀರ್ಮಾನ.ಇಂದಿಗೂ ಎರಡೂ ವಿಗ್ರಹಗಳು ಈ ದೇಗುಲದಲ್ಲಿ ಇರುವುದನ್ನು ದಾಖಲಿಸಿ ಉಳಿದು ಬಂದಿರುವುದಕ್ಕೆ ಸಾಕ್ಷಿ.
ಈ ವಿಗ್ರಹದ ಮುಖವು ಪೂರ್ವ ದಿಕ್ಕಿನತ್ತ ಇದೆ.ಪಾದಗಳು ಪಶ್ಚಿಮದತ್ತ ವಾಲಿವೆ.ದಕ್ಷಿಣ ದಿಕ್ಕಿಗೆ ದೇಗುಲ.ಬಾಲಕ್ಕೆ ಗಂಟೆ ಮತ್ತು ಕಾಲುಗಳ ಮಧ್ಯದಲ್ಲಿ ಚಕ್ರ ಇವು ಈ ಹನುಮಂತನ ವಿಶೇಷತೆಗಳು. ಈ ರೀತಿಯ ವಿಗ್ರಹಗಳು ಅಪರೂಪ.ಚಕ್ರವು ತಿರುಪತಿ ತಿಮ್ಮಪ್ಪ ಮತ್ತು ವಿಷ್ಣುವಿನ ಸ್ವರೂಪದ್ದಾಗಿದೆ.ಬಾಲದ ಗಂಟೆಯು ಧೈರ್ಯದ ಮತ್ತು ಶಕ್ತಿ ಸ್ವರೂಪ ಎಂಬುದು ಹಿರಿಯರ ಅಭಿಪ್ರಾಯವಾಗಿದೆ.ಇಂತಹ ಅಪರೂಪದ ವಿಗ್ರಹ ಪುರಾತನದ್ದು.
ಆಚರಣೆಗಳು
ಪ್ರತಿ ದಿನವೂ ಪೂಜೆ ಸಲ್ಲಿಸುವ ಇಲ್ಲಿನ ಆಂಜನೇಯನಿಗೆ ಪ್ರತಿ ಶನಿವಾರ ಭಕ್ತರ ಇಷ್ಟಾರ್ಥದ ಮೇರೆಗೆ ಅಭಿಷೇಕಗಳು ಜರಗುತ್ತವೆ.ಹನುಮಾನ ಜಯಂತಿ ಮತ್ತು ಕಾರ್ತಿಕ ಮಾಸದಲ್ಲಿ ಸಡಗರದ ಪೂಜಾ ವಿಧಿವಿಧಾನಗಳು ಇಲ್ಲಿ ಜರಗುತ್ತ ಬಂದಿವೆ.
ದೇವಾಲಯದ ಆವರಣ
ದೇವಾಲಯದ ಪ್ರಾಂಗಣ ವಿಶಾಲವಾಗಿದ್ದು ಪ್ರದಕ್ಷಿಣ ಪಥವನ್ನು ಹೊಂದಿದೆ.ತೆರೆದ ಪ್ರಾಂಗಣ ಹೊರಾಂಗಣವನ್ನು ಸುತ್ತಲೂ ವೀಕ್ಷಿಸುವಂತೆ ಗಾಳಿ ಬೆಳಕಿನಿಂದ ಕೂಡಿದ್ದು ಮಧ್ಯದಲ್ಲಿ ದೇವಾಲಯ ಗರ್ಭಗುಡಿಯಿದೆ. ದೇವಾಲಯದ ಆವರಣದಲ್ಲಿ ತುಳಸಿ ಮತ್ತು ನಾಗದೇವ ಕಟ್ಟೆಗಳಿವೆ.ಬಿಲ್ವಪತ್ರಿ ಮರವನ್ನು ಹೊಂದಿದ ಆವರಣದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕೂಡ ಒಂದು ಬದಿಯಲ್ಲಿದೆ.ಹೀಗಾಗಿ ಇಲ್ಲಿ ಸವದತ್ತಿಯ ಎಲ್ಲಮ್ಮನ ದೇವಾಲಯಕ್ಕೆ ಹೊರಟು ಬರುವ ಮಹಾರಾಷ್ಟ್ರ.ಚಿಕ್ಕೋಡಿ.ಸಂಕೇಶ್ವರ.ಭಕ್ತರು ಇಲ್ಲಿನ ಆವರಣ ಮತ್ತು ಮರದ ನೆರಳಿನ ಕಟ್ಟೆಯ ಮೇಲೆ ಕುಳಿತು ಊಟ ಮಾಡಿಕೊಂಡು ವಿಶ್ರಮಿಸಿಕೊಂಡು ಹೋಗುವುದು ವಾಡಿಕೆ.
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೮೯೭೧೧೧೭೪೪೨ ೯೪೪೯೫೧೮೪೦೦