ಡಯಟ್ ಆವರಣದಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ವಿರೋಧಿಸಿ ಮನವಿ..
ಧಾರವಾಡ: ಕನ್ನಡದ ಶಕ್ತಿ ಕೇಂದ್ರ ನಗರದ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು ಎಂದೇ ಪ್ರಸಿದ್ಧವಾಗಿರುವ ಪಾರಂಪರಿಕ ತಾಣ (ಹೆರಿಟೇಜ್ ಸೈಟ್) ಈಗಿನ ಡಯಟ್ ಆವರಣದಲ್ಲಿ ಹೆಸ್ಕಾಂ ಉದ್ದೇಶಿಸಿರುವ ಅಧಿಕ ಸಾಮರ್ಥ್ಯದ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆಯನ್ನು ವಿರೋಧಿಸಿ ಡಯಟ್ ಹಳೆಯ ವಿದ್ಯಾರ್ಥಿಗಳ ವೇದಿಕೆ, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳು ಹಾಗೂ ನೌಕರರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಟ್ರೇನಿಂಗ್ ಕಾಲೇಜು 1865ರಲ್ಲಿಯೇ “ಈ ಕರ್ನಾಟಕ ಸೀಮೆಯಲ್ಲಿ ಶುದ್ಧವಾದ ಕನ್ನಡ ಭಾಷೆಯ ವಿಸ್ತಾರವು ಆಗತಕ್ಕದ್ದು” ಎಂದು ದಾಖಲಿಸಿ ಧಾರವಾಡದ ನೆಲದಲ್ಲಿ ‘ಕನ್ನಡದ ಡಿಂಡಿಮ’ವನ್ನು ಬಾರಿಸಿ ಕನ್ನಡ ಜಾಗೃತಿಯನ್ನು ಮೊಳಗಿಸಿ ಸಮಸ್ತ ಕನ್ನಡಿಗರ ಹೆಮ್ಮೆಗೆ ಪಾತ್ರವಾಗಿದೆ. ಈ ಚಾರಿತ್ರಿಕ ಸಂಸ್ಥೆಯ ಒಟ್ಟು ಆವರಣಕ್ಕೆ ಮತ್ತು ಅದರಲ್ಲಿಯ ಎಲ್ಲಾ ಕಟ್ಟಡಗಳಿಗೆ ತನ್ನದೇ ಆದ ಮಹತ್ವ ಇದೆ. ಇತ್ತೀಚೆಗಷ್ಟೇ ಡಯಟ್ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಈ ಚಾರಿತ್ರಿಕ ಸಂಸ್ಥೆಯ ಆವರಣದಲ್ಲಿ ‘ಪ್ರಶಿಕ್ಷಣ ವಿಶ್ವವಿದ್ಯಾಲಯ’ (ಯುನಿರ್ವಸಿಟಿ ಆಫ್ ಟೀಚರ್ ಎಜ್ಯುಕೇಷನ್) ಆರಂಭಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಗಿದೆ. ಹಾಗಾಗಿ ಈ ವಿಶ್ವವಿದ್ಯಾಲಯ ಸ್ಥಾಪನೆಗೆ ಡಯಟ್ ಆವರಣವನ್ನು ಮೀಸಲು ಇಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಡಯಟ್ ಆವರಣ ಹೊರತುಪಡಿಸಿ ಧಾರವಾಡದಲ್ಲಿ ಲಭ್ಯವಿರುವ ಬೇರೆ ಸ್ಥಳಗಳಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪಿಸಬೇಕು. ಜೊತೆಗೆ ಯಾವುದೇ ಕಾಲೇಜು, ವಸತಿ ನಿಲಯಗಳು, ಸರಕಾರಿ ಇಲ್ಲವೇ ಖಾಸಗಿ ಸ್ವಾಮ್ಯದ ಕಚೇರಿಗಳ ನಿರ್ವಹಣೆಗೆ ಡಯಟ್ ಆವರಣದ ನಿವೇಶನ ಇಲ್ಲವೇ ಕಟ್ಟಡಗಳನ್ನು ಹಸ್ತಾಂತರ ಮಾಡಬಾರದು ಎಂದು ಮನವಿ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ವಿವರವಾದ ಚರ್ಚೆಯ ನಂತರ ಧಾರವಾಡ ನಗರದಲ್ಲಿ ಲಭ್ಯವಿರುವ ಬೇರೆ ನಿವೇಶನಗಳನ್ನು ಗುರುತಿಸಿ ಅಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆಗೆ ಪರಿಶೀಲಿಸಲಾಗುವುದೆಂದು ಭರವಸೆ ನೀಡಿ, ಈ ಕುರಿತು ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಶಿವಶಂಕರ ಹಿರೇಮಠ, ಜಿ.ಆರ್. ಕೆಂಚರಡ್ಡೇರ, ಎಸ್.ಬಿ. ಕೊಡ್ಲಿ, ಎಚ್.ಎಚ್.ಮೇಟಿ, ಜೆ.ಎನ್. ನಂದನ, ಕೆ.ಎಸ್. ಬಂಗಾರಿ, ಎನ್.ಎಂ. ಶಿವಳ್ಳಿ, ಎ.ವ್ಹಿ. ನಾಗನೂರ, ಎಂ. ಎಚ್. ಮುಲ್ಲಾ, ಜಿ.ಬಿ. ಸಜ್ಜನರ, ಮಲ್ಲಿಕಾರ್ಜುನ ಚಿಕ್ಕಮಠ, ಕೆ.ಎಚ್. ನಾಯಕ, ವ್ಹಿ.ಎನ್. ಕೀರ್ತಿವತಿ, ಬಿ.ಜಿ. ಬಾರ್ಕಿ, ಎ.ವೈ.ದೇಸಾಯಿ, ಡಯಟ್ ಹಳೆಯ ವಿದ್ಯಾರ್ಥಿಗಳ ವೇದಿಕೆಯ ಅಶೋಕ ಚವ್ಹಾಣ, ಎಸ್.ಡಿ. ಪವಾರ, ಜಿ.ಎನ್. ಹೊಸಮನಿ, ಜಿ.ಕೆ. ಜುಜಾರೆ, ಎಸ್.ಐ. ತಿಪ್ಪಯ್ಯನವರ, ಡಾ.ಗುರುಮೂರ್ತಿ ಯರಗಂಬಳಿಮಠ, ಜಯಶ್ರೀ ಎಸ್. ಇದ್ದರು.
—————————————-