ಬೆಂಗಳೂರು ಗ್ರಾಮಾಂತರ: ಇಲ್ಲಿನ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರ್ಗಾವಣೆ (teacher transfer) ಆಗದಿದ್ದಕ್ಕೆ ಮನನೊಂದು ಶಿಕ್ಷಕಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ನಡೆದಿದೆ.
ಎನ್.ಟಿ ಜ್ಯೋತಿ (40) ನೇಣಿಗೆ ಶರಣಾದ ಶಿಕ್ಷಕಿ.
ದೊಡ್ಡಬಳ್ಳಾಪುರದ ತುರವನಹಳ್ಳಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ, ಪ್ರೌಡಶಾಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರು. ಆದರೆ ವರ್ಗಾವಣೆ ಆಗದ ಕಾರಣಕ್ಕೆ ಮನನೊಂದು ರೂಮಿನ ಕಿಟಿಕಿಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಿಕ್ಷಕಿ ಇಂತಹ ದುಡುಕಿನ ನಿರ್ಧಾರಕ್ಕೆ ಕೈಹಾಕಿದ್ದಾರೆ. ಪತಿ ವಿರೂಪಾಕ್ಷ ರಾತ್ರಿ ಮನೆಗೆ ಬಂದಾಗ ರೂಮಿನ ಡೋರ್ ಲಾಕ್ ಆಗಿತ್ತು. ನಿದ್ದೆಯಲ್ಲಿರಬೇಕೆಂದು ಸುಮ್ಮನಾಗಿದ್ದ ವಿರೂಪಾಕ್ಷ ಬೆಳಗ್ಗೆ ಎದ್ದು ನೋಡಿದಾಗ ಪತ್ನಿ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ.
ಈ ಸಂಬಂಧ ವಿರೂಪಾಕ್ಷ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜ್ಯೋತಿ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.