ರಾಜ್ಯದ ಸಾಮಾನ್ಯ ಭವಿಷ್ಯ ನಿಧಿ ಖಾತೆಗೆ ಚಂದದಾರರು ಒಂದು ಆರ್ಥಿಕ ವರ್ಷದಲ್ಲಿ ಪಾವತಿಸಬಹುದಾಗಿ ವಂತಿಕೆಯನ್ನು ರೂ.5 ಲಕ್ಷಗಳಿಗೆ ಮಿತಿಗೊಳಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ನೀಡಿದೆ.
ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದಾರೆ. ಅದರಲ್ಲಿ ಕೇಂದ್ರ ಸರ್ಕಾರದ ದಿನಾಂಕ 15-06-2022ರ ಅಧಿಸೂಚನೆಯಲ್ಲಿ ಸಾಮಾನ್ಯ ಭವಿಷ್ಯನಿಧಿ (ಕೇಂದ್ರ ಸೇವೆ) ನಿಯಮಗಳಿಗೆ ತಿದ್ದುಪಡಿಯನ್ನು ತಂದು, ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಚಂದಾದಾರರು ಒಂದು ವರ್ಷಕ್ಕೆ ಪಾವತಿಸಬಹುದಾದ ವಂತಿಗೆಯನ್ನು ರೂ.5 ಲಕ್ಷಗಳಿಗೆ ಮಿತಿಗೊಳಿಸಲಾಗಿರುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳ ಮಾದರಿಯಲ್ಲೇ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು -1957 ಅನ್ನು ಪರಿಷ್ಕರಿಸಿ, ಸೂಕ್ತ ತಿದ್ದುಪಡಿಯನ್ನು ತಂದು ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು 2016ಅನ್ನು ದಿನಾಂಕ 25-03-2017ರ ಅಧಿಸೂಚನೆಯಲ್ಲಿ ಜಾರಿಗೆ ತರಲಾಗಿರುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಚಂದಾದಾರರಿಗೂ ಸಹ ಒಂದು ವರ್ಷಕ್ಕೆ ಪಾವತಿಸಬಹುದಾದ ವಂತಿಕೆಯನ್ನು 5 ಲಕ್ಷಗಳಿಗೆ ಮಿತಿಗೊಳಿಸುವುದು ಸೂಕ್ತವೆಂದು ತೀರ್ಮಾನ ಕೈಗೊಳ್ಳಲಾಗಿರುತ್ತದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಾಮಾನ್ಯ ಭವಿಷ್ಯ ನಿಧಿ ಖಾತೆಗೆ ಚಂದಾದಾರರು ಒಂದು ಆರ್ಥಿಕ ವರ್ಷದಲ್ಲಿ ಪಾವತಿಸಬಹುದಾದ ಗರಿಷ್ಠ ವಂತಿಗೆಯನ್ನು ರೂ.5 ಲಕ್ಷಗಳಿಗೆ ಮಿತಿಗೊಳಿಸಿ ಆದೇಶಿಸಿದ್ದಾರೆ.