ಸರ್ಕಾರಿ ಬಸ್ನಿಂದ ಬಿದ್ದು ಶಾಲಾ ಬಾಲಕಿ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ…
ಸರ್ಕಾರಿ ಸಾರಿಗೆ ಬಸ್ನಿಂದ ಬಿದ್ದು ಶಾಲಾ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಮೃತ ಬಾಲಕಿಯನ್ನು ಮಧು ಚಕ್ರಸಾಲಿ (13) ಎಂದು ಗುರುತಿಸಲಾಗಿದೆ. ಬಾಲಕಿಯು ವಾಸನ ಗ್ರಾಮದಿಂದ ಕುಸನೂರು ಗ್ರಾಮದಲ್ಲಿರುವ ಪ್ರೌಢಶಾಲೆಗೆ ಆಗಮಿಸುವ ವೇಳೆ ಈ ಘಟನೆ ಸಂಭವಿಸಿದೆ.
ಬಸ್ ಜನರಿಂದ ತುಂಬಿದ್ದ ಕಾರಣಕ್ಕಾಗಿ ಬಾಲಕಿ ಬಾಗಿಲ ಬಳಿಯೇ ನಿಂತಿದ್ದಳು. ಅಲ್ಲದೆ ರಸ್ತೆ ಕೂಡ ಹದಗೆಟ್ಟಿತ್ತು ಎಂದು ಹೇಳಲಾಗಿದೆ. ಈ ವೇಳೆ ಬಾಗಿಲಿನ ಬಳಿ ನಿಂತಿದ್ದ ಬಾಲಕಿ ಆಯತಪ್ಪಿ ಕೆಳ ಬಿದ್ದು ಸಾವನ್ನಪ್ಪಿದ್ದಾಳೆ. ಗಂಭೀರ ಗಾಯಗೊಂಡ ಬಾಲಕಿಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆಗೆ ಸ್ಪಂದಿಸದೆ ಮೃತಳಾಗಿದ್ದಾಳೆ. ಮೃತ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಐಆರ್ನಲ್ಲಿ, ಸಾರಿಗೆ ಬಸ್ ಚಾಲಕ ನಿರ್ಲಕ್ಷ್ಯತನದಿಂದ ವೇಗವಾಗಿ ಬಸ್ ಚಲಾಯಿಸಿದ್ದರಿಂದ ಬಸ್ನ ಮುಂಭಾಗದ ಬಾಗಿಲಿನಲ್ಲಿ ನಿಂತಿದ್ದ ಬಾಲಕಿ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಇದರಿಂದ ಗಂಭೀರ ಗಾಯಗೊಂಡ ಬಾಲಕಿಯನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ದೂರಲಾಗಿದೆ.