ಸೃಷ್ಟಿಯೇ ತಾಯಿ..
ಪ್ರಕೃತಿಯೆಂಬ ತಾಯಿಯ ಮಡಿಲಲ್ಲಿ ಇರುವ ಎಲ್ಲ ಮಕ್ಕಳನ್ನು ಅನೇಕ ಪ್ರಕೃತಿ ವಿಕೋಪಗಳಿಂದ ಆಗುವ ದುಷ್ಪರಿಣಾಮಗಳಿಂದ ರಕ್ಷಿಸುತ್ತದೆ . ಆದರೆ ತಿಳುವಳಿಕೆ ಇರುವ ಮಾನವ ಜಾತಿಯ ಮಕ್ಕಳು ನಮ್ಮ ತಾಯಿಗೆ ಏನು ಉಪಕಾರ ಅಥವಾ ಅವಳ ರಕ್ಷಣೆಗಾಗಿ ಏನನ್ನು ಮಾಡುತ್ತಿಲ್ಲ ಬದಲಾಗಿ ಪ್ರಕೃತಿಯ ಬಹುದೊಡ್ಡ ಅಂಗವಾಗಿರುವ ಗಿಡಮರಗಳನ್ನು ಕತ್ತರಿಸಿ, ಕಾರ್ಖಾನೆಗಳನ್ನು ಕಟ್ಟಿ ಅದರಿಂದ ಬರುವ ತ್ಯಾಜ್ಯ ನೀರನ್ನು ನದಿ ಸರೋವರಗಳಿಗೆ ಬಿಟ್ಟು ತಾಯಿಯ ಹೊಟ್ಟೆಗೆ ವಿಷ ಉಣಿಸುತ್ತಿದ್ದೇವೆ.
ಪ್ರಕೃತಿಯೆಂಬ ತಾಯಿ ನಮ್ಮನ್ನು ಹೊತ್ತು ಹೆತ್ತಿಲ್ಲ ಆದರೆ ಆ ಪ್ರಕೃತಿಯನ್ನು ಹೊರತುಪಡಿಸಿದರೆ ನಾವೇ ಇರುವುದಿಲ್ಲ. ನಮ್ಮನ್ನು ಹೆತ್ತ ತಾಯಿಯನ್ನು ನಾವು ಎಷ್ಟು ಪ್ರೀತಿ ಗೌರವ ವಾತ್ಸಲ್ಯದಿಂದ ನೋಡಿಕೊಳ್ಳುತ್ತೇವೆ ಹಾಗೆಯೇ ಸೃಷ್ಟಿ ಎಂಬ ತಾಯಿಯನ್ನು ಪ್ರೀತಿಯಿಂದ ಪಾಲನೆ ಪೋಷಣೆ ಮಾಡುವುದು ತಿಳುವಳಿಕೆಯುಳ್ಳ ಮನುಜ ಜಾತಿಯ ಮಕ್ಕಳಾದ ನಮ್ಮೆಲ್ಲರ ಕರ್ತವ್ಯ.
ನಾವು ನಮ್ಮ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೂ ಅವಳು ಮಾತ್ರ ಮಕ್ಕಳ ಮೇಲೆ ಮುನಿಸಿಕೊಳ್ಳುವುದಿಲ್ಲ. ಹಾಗೆಯೇ ನಮ್ಮ ಪ್ರಕೃತಿಗೆ ನಾವು ಎಷ್ಟೇ ಕೆಡುಕನ್ನು ಮಾಡಿದರು ಅದು ಮಾತ್ರ ನಮಗೆ ಹೊತ್ತೊತ್ತಿಗೆ ಮಳೆ ಬೆಳೆಯನ್ನು ಕೊಡುವುದು ನಿಲ್ಲಿಸಿಲ್ಲ. ನಮ್ಮ ಹೊಟ್ಟೆಗೆ ಊಟ ಹಾಕುತ್ತಿರುವ ನೆಲೆಯನ್ನು ನೀಡಿರುವ ಆ ಪ್ರಕೃತಿಯೆಂಬ ತಾಯಿಗೆ ಈ ಬಾರಿಯ ತಾಯಂದಿರ ದಿನಾಚರಣೆಯನ್ನು ಮುಡುಪಾಗಿಡೋಣ, ಪ್ರಕೃತಿಯ ದಿನ ಅಂತ ಪ್ರತ್ಯೇಕವಾಗಿ ಆಚರಿಸಿದರು ಕೂಡ ಈ ಬಾರಿ ನಾವೆಲ್ಲರೂ ನಮ್ಮ ಮೂಲ ತಾಯಿ ಎನಿಸಿಕೊಂಡ ಆ ಪ್ರಕೃತಿಗೆ ನಮ್ಮ ಈ ದಿನವನ್ನು ಅರ್ಪಿಸೋಣ.
– ಅನ್ವಿತಾ .ಅನಂತರಾಜ್ .ಮಿಸ್ತ್ರಿ ಗುಲ್ಬರ್ಗಾ